ಹೊಸದಿಗಂತ ಡಿಜಿಟಲ್ ಡೆಸ್ಕ್:
ಇವರು ಉತ್ತರಪ್ರದೇಶದ ಇಟವಾ ನಿವಾಸಿ ರಾಬಿನ್ ಸಿಂಗ್. ಈಗಾಗಲೇ ಸೈಕಲ್ನಲ್ಲೇ ಹಲವು ರಾಜ್ಯ ದಾಟಿದ ಈ ಯುವಕನ ದೇಶ ಪರ್ಯಟನೆ ಮುಂದಿನ 2024ರ ಮಾರ್ಚ್ನಲ್ಲಿ ಮಧ್ಯಪ್ರದೇಶದ ಭೂಪಾಲ್ನಲ್ಲಿ ಸಮಾಪ್ತಿಗೊಳ್ಳಲಿದೆ. ಸದ್ಯ ಇವರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿದ್ದಾರೆ.
ಯಾಕೆ ಈ ಸೈಕಲ್ ಅಭಿಯಾನ?
ಪರಿಸರ ಕಾಳಜಿ, ಅದರಲ್ಲೂ ಪ್ಲಾಸ್ಟಿಕ್ನಿಂದ ಜೀವಜಲದ ಮೇಲಾಗುವ ದುಷ್ಪರಿಣಾಮಗಳ ಕುರಿತು ಪ್ರತೀ ರಾಜ್ಯಗಳ ಪ್ರತೀ ಜಿಲ್ಲೆ ಗಳಿಗೆ ತೆರಳಿ ಜಾಗೃತಿ ಮೂಡಿಸುವುದು ಈ ಸೈಕಲ್ ಸವಾರಿ ಮುಖ್ಯ ಉದ್ದೇಶವಾಗಿದೆ.
ಕನ್ಯಾಕುಮಾರಿಯಿಂದ ಆರಂಭ
ಅಕ್ಟೋಬರ್ 2022ರಲ್ಲಿ ತಮಿಳುನಾಡಿನ ಕನ್ಯಾಕುಮಾರಿಯಿಂದ ಸೈಕಲ್ ಮೂಲಕ ದೇಶ ಪರ್ಯಟನೆ ಆರಂಭಿಸಿದ ರಾಬಿನ್ ಸಿಂಗ್ ಈಗಾಗಲೇ ಉತ್ತರ ಮತ್ತು ದಕ್ಷಿಣ ಭಾರತದ ಬಹುತೇಕ ರಾಜ್ಯ ಕ್ರಮಿಸಿದ್ದಾರೆ.
ದಕ್ಷಿಣ ಕನ್ನಡದಿಂದ ನೇರವಾಗಿ ತೆಲಂಗಾಣ ರಾಜ್ಯಕ್ಕೆ ಪ್ರಯಾಣ ಬೆಳೆಸಲಿರುವ ಸಿಂಗ್, 2024 ಮಾರ್ಚ್ನಲ್ಲಿ ಮಧ್ಯ ಪ್ರದೇಶದ ಭೂಪಾಲ್ಗೆ ತಲುಪಿ ತನ್ನ ಪರಿಸರ ಜಾಗೃತಿಯನ್ನು ಸಮಾಪ್ತಿಗೊಳಿಸಲಿದ್ದಾರೆ.
ಈಗಾಗಲೇ ಸಾವಿರಾರು ಕಿ.ಮೀ. ಸೈಕಲ್ನಲ್ಲಿ ಕ್ರಮಿಸಿರುವ ರಾಬಿನ್ ಸಿಂಗ್ ತನ್ನ ಈ ಜಾಗೃತಿಗೆ ‘ಗ್ರೀನ್ ಇಂಡಿಯಾ ಅಭಿಯಾನ’ ಎನ್ನುವ ಹೆಸರನ್ನೂ ಇಟ್ಟುಕೊಂಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಗೆ ಭೇಟಿ
ದೇಶ ಪರ್ಯಟನೆಯ ಭಾಗವಾಗಿ ಈಗ ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಸಿಂಗ್, ಶಾಲಾ, ಕಾಲೇಜ್ಗಳ ಬಳಿಗೆ ತೆರಳಿ ಮುಖ್ಯವಾಗಿ ಯುವಜನತೆಗೆ ಪರಿಸರದ ಕುರಿತ ಕಾಳಜಿ ಮತ್ತು ಪ್ಲಾಸ್ಟಿಕ್ನಿಂದ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ