ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಗ ನಮ್ಮ ದೇಶದ 130 ಟನ್ ಚಿನ್ನವನ್ನು ಅಡ ಇಟ್ಟಿದ್ದ ಭೀಕರ ಪರಿಸ್ಥಿತಿಯಲ್ಲಿ ಹಣಕಾಸು ಮಂತ್ರಿಯಾಗಿ ಮನಮೋಹನ್ ಸಿಂಗ್ ಅವರು ದೇಶಕ್ಕಾಗಿ ಕೆಲಸ ಮಾಡಿದ್ದರು ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಸ್ಮರಿಸಿದರು.
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ನಿಧನ ಹಿನ್ನೆಲೆ ಜೆಡಿಎಸ್ ಕಚೇರಿಯಲ್ಲಿ ಸಂತಾಪ ಸೂಚನೆ ಕಾರ್ಯಕ್ರಮ ನಡೆಯಿತು.
ಇವತ್ತು ಅತ್ಯಂತ ದುಃಖದ ದಿವಸ. ಮನಮೋಹನ್ ಸಿಂಗ್ ಅವರನ್ನು ನಾನು ನೋಡಿದ್ದು ಲೋಕಸಭೆಯಲ್ಲಿ. 1991 ರಲ್ಲಿ ನಾನು ಕರ್ನಾಟಕದಿಂದ ಮೊದಲ ಬಾರಿಗೆ ಲೋಕಸಭೆಗೆ ಹೋದಾಗಿ ನೋಡಿದ್ದೆ. ಅವರು ನರಸಿಂಹ ರಾವ್ ಸರ್ಕಾರದಲ್ಲಿ ಹಣಕಾಸು ಮಂತ್ರಿ ಆಗಿದ್ರು. ಅದಕ್ಕೂ ಮುಂಚೆ ಹಲವಾರು ಹುದ್ದೆಯಲ್ಲಿ ದೇಶದ ಆರ್ಥಿಕ ಪರಿಸ್ಥಿತಿ ಸರಿಪಡಿಸಲು ಪ್ರಯತ್ನ ಮಾಡಿದ್ದಾರೆ ಎಂದು ನೆನೆದರು.
ರಿಸರ್ವ್ ಬ್ಯಾಂಕ್ ಗವರ್ನರ್ ಆಗಿದ್ದರು. ವಿಶ್ವಸಂಸ್ಥೆಯಲ್ಲಿ ಅಧಿಕಾರಿಯಾಗಿ ಕೆಲಸ ಮಾಡಿದ್ರು. ಅವರ ತಂದೆ ಪಾಕಿಸ್ತಾನದಿಂದ ಬಂದವರು. ಸಿಂಗ್ ಅವರು ಆರ್ಥಿಕವಾಗಿ ತುಂಬಾ ಬುದ್ದಿವಂತರು. ಅವರಿಗೆ ಬಹಳ ಅನುಭವ ಆರ್ಥಿಕ ವಿಚಾರದಲ್ಲಿ ಇತ್ತು. ನರಸಿಂಹ ರಾವ್ ಪ್ರಧಾನಿ ಆದಾಗ ದೇಶದ ಸ್ಥಿತಿ ತುಂಬಾ ಹದಗೆಟ್ಟಿತ್ತು. ಆಗ ನಮ್ಮ ದೇಶದ 130 ಟನ್ ಚಿನ್ನವನ್ನ ಅಡ ಇಡುತ್ತಾರೆ. ಅಂತಹ ಭೀಕರ ಪರಿಸ್ಥಿತಿ ಅವತ್ತು ಇತ್ತು. ಅಂತಹ ಸನ್ನಿವೇಶದಲ್ಲಿ ಹಣಕಾಸು ಮಂತ್ರಿಯಾಗಿ ಕೆಲಸ ಮಾಡಿದ್ರು. ಈ ದೇಶವನ್ನ, ದೇಶದ ಗೌರವ ಉಳಿಸಲು ಆರ್ಥಿಕ ತಜ್ಞರಾಗಿ ತಮ್ಮ ಪ್ರಯತ್ನ ಪ್ರಾರಂಭ ಮಾಡಿದ್ರು ಎಂದು ನೆನಪಿಸಿಕೊಂಡರು.