July 17, 2026
Friday, July 17, 2026
spot_img

ಶಿರಸಿ ಮಾರಿಕಾಂಬೆ ದೇವಿಯ ಸೇವೆ ಹೆಸರಿನಲ್ಲಿ ಹಣ ವಸೂಲಿ: ಇದನ್ನೆಲ್ಲ ನಂಬಬೇಡಿ ಎಂದ ಪೊಲೀಸ್ ಇಲಾಖೆ

ಹೊಸದಿಗಂತ ವರದಿ ಕಾರವಾರ:

ರಾಜ್ಯದ ಅತಿದೊಡ್ಡ ಜಾತ್ರೆಗಳಲ್ಲಿ ಒಂದಾಗಿರುವ ಶಿರಸಿಯ ಶ್ರೀಮಾರಿಕಾಂಬಾ ದೇವಿಯ ಜಾತ್ರೆ ಆರಂಭವಾಗಿದ್ದು ಶ್ರೀದೇವರ ಸೇವೆಯ ಹೆಸರಿನಲ್ಲಿ ಆನ್ ಲೈನ್ ಹಣ ಸಂದಾಯ ಮಾಡುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟವಾಗುವ ಜಾಹೀರಾತುಗಳನ್ನು ನಂಬದಂತೆ
ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಸೂಚನೆ ನೀಡಲಾಗಿದೆ.

ಯಜಮಾನ ಎಂಬ ಐ.ಡಿಯಿಂದ ಜಾಹಿರಾತು ನೀಡಿ ಫೆಬ್ರುವರಿ 24 ರಿಂದ ಮನೆಯಲ್ಲಿ ಕುಳಿತು ಶ್ರೀಮಾರಿಕಾಂಬಾ ಜಾತ್ರೆಯಲ್ಲಿ ದೇವಿಗೆ ವಿಶೇಷ ಸೀರೆ ಸೇವೆಯನ್ನು ಆನ್ ಲೈನ್ ಮೂಲಕ ಕೇವಲ 3517 ರೂಪಾಯಿಗಳಲ್ಲಿ ಮಾಡಲಾಗುತ್ತದೆ, ಸೇವೆಯನ್ನು ವಿಧಿ ವಿಧಾನಗಳ ಮೂಲಕ ನೆರವೇರಿಸಿ ಸೇವೆಯ ವೀಡಿಯೋ ದೇವಿಯ ಪ್ರಸಾದ ಕುಂಕುಮ ಹಳದಿ ಬ್ಲೌಸ್ ಪೀಸ್ ಸೇವಾಕರ್ತರ ಮನೆಗೆ ತಲುಪಿಸಲಾಗುತ್ತದೆ ಈಗಲೇ ಬುಕ್ ಮಾಡಿ ಎಂದು ಜಾಹೀರಾತು ನೀಡಲಾಗಿದೆ.

ಇದೊಂದು ವಂಚನೆಯ ಕೃತ್ಯವಾಗಿದೆ ಮಾರಿಕಾಂಬಾ ದೇವಿಯ ಜಾತ್ರಾ ಸೇವೆಯ ಹೆಸರಿನಲ್ಲಿ ಜನರನ್ನು ವಂಚಿಸಲಾಗುತ್ತಿದ್ದು ಶಿರಸಿ ಶಹರ ಪೊಲೀಸ್ ಠಾಣೆಯಲ್ಲಿ ಈ ಕುರಿತಂತೆ ವಂಚನೆ ಪ್ರಕರಣ ದಾಖಲಾಗಿದೆ. ಶ್ರಿಮಾರಿಕಾಂಬಾ ದೇವಾಲಯ ಮತ್ತು ಆಡಳಿತ ಮಂಡಳಿಯ ವತಿಯಿಂದ ಜಾತ್ರೆಯ ಪ್ರಯುಕ್ತ ಆನ್ ಲೈನ್ ಸೇವೆಗಳ ಕುರಿತಂತೆ ಯಾವುದೇ ರೀತಿಯ ಜಾಹೀರಾತು ನೀಡಲಾಗಿಲ್ಲ ಎ.ಐ ವೀಡಿಯೋ ಬಳಸಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸುವ ಸುಳ್ಳು ಜಾಹೀರಾತುಗಳನ್ನು ಭಕ್ತರು ನಂಬಬಾರದು ಹಾಗೂ ಈ ರೀತಿಯ ಜಾಹೀರಾತು ಪ್ರಕಟಿಸುವ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡುವ ಕಿಡಿಗೇಡಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಉತ್ತರ ಕನ್ನಡ ಜಿಲ್ಲಾ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !