ಇದೊಂದು ಹಳೇ ಕಾಲದ ಲವ್ ಸ್ಟೋರಿ. ಆದರೆ ಈ ಹಳೆ ಕಥೆಯಲ್ಲಿ ಹೊಸ ಪಾಠವೊಂದಿದೆ!
ಹುಡುಗ ಆಕೆಯನ್ನು ಸಿಕ್ಕಾಪಟ್ಟೆ ಇಷ್ಟಪಟ್ಟು ಹಿಂದೆ ಬೀಳ್ತಾನೆ. ಆಕೆಗೆ ಅಪ್ಪ-ಅಮ್ಮ-ಮನೆ ಇಷ್ಟೆ ಪ್ರಪಂಚ. ಮನೆಯವರು ಹೇಳಿದ್ದನ್ನು ಮಾಡ್ತಿರ್ತಾಳೆ ಅಷ್ಟೆ.
ಆದರೆ ಇವನು ಅವಳ ಜೀವನಕ್ಕೆ ಬಂದಮೇಲೆ ಅವಳಿಗೇನು ಇಷ್ಟವೋ ಅದನ್ನು ಮಾಡೋದಕ್ಕೆ ಶುರು ಮಾಡ್ತಾಳೆ. ಜೀವನ ಹೀಗಿತ್ತಾ ಅನಿಸೋದಕ್ಕೆ ಶುರುವಾಗತ್ತೆ. ಯಾವುದೇ ಸಂಬಂಧದಲ್ಲೂ ಜಗಳ ಇಲ್ಲದೆಯೇ ಇರುತ್ಯೆ? ಹಾಗೆ ಇವರೂ ಕೂಡ ಕಿತ್ತಾಡ್ತಾ ಇದ್ರು, ಹಾಗೇ ಮರುದಿನ ಸರಿ ಆಗ್ತಾ ಇದ್ರು.
ಅದೊಂದು ದಿನ ಇವರ ಪ್ರೀತಿ ವಿಷಯ ಅವಳ ಅಪ್ಪ-ಅಮ್ಮನಿಗೆ ತಿಳಿಯಿತು. ಒಮ್ಮೆ ಹುಡುಗನನ್ನ ಭೇಟಿ ಮಾಡಿದ್ರು. ಆತ ದಡ್ಡ, ಶ್ರಮಜೀವಿ. ಮರಳು ಹೊರೋದು, ಗಾರೆ ಕೆಲಸ ಮಾಡೋದು ಅವನ ಕಸುಬು. ಮಗಳಿಗೆ ಇವನು ಸೆಟ್ ಆಗೋದಿಲ್ಲ ಅಂತ ಜಾಣ್ಮೆಯಿಂದ ಆಕೆಗೆ ತಿಳಿ ಹೇಳಿದ್ರು. ಅವಳು ಮಾತ್ರ ಒಪ್ಪಲಿಲ್ಲ ಅವನೇ ಬೇಕು ಅಂತ ಹಠ ಹಿಡಿದಳು.
ಅವರಪ್ಪ ಅಮ್ಮ ಅವನನ್ನು ಮನೆಗೆ ಕರೆಸಿ ಇದು ಸರಿಯಾಗದು ಅಂತ ತಿಳಿ ಹೇಳಿ ಕಳಿಸಿದ್ರು. ಇದು ಆತನ ಸ್ವಾಭಿಮಾನಕ್ಕೆ ಧಕ್ಕೆಯಾಯ್ತು. ಆತ ಮನೆಗೆ ಬಂದು ಹೋಗಿದ್ದು, ಇವಳಿಗೆ ತಿಳಿದಿರಲಿಲ್ಲ. ಮಾಮೂಲಿಯಂತೆ ಈಕೆ ಬಂದು ಮಾತನಾಡಿಸಿದಾಗ, ನಿಮಗೆಲ್ಲ ದುಡ್ಡಿನ ದೌಲತ್ತು ಎಂದು ರೇಗಿದ. ಏನೂ ಅರಿಯದ ಅವಳಿಗೆ ಇವನ ಗುಣ ಹಿಡಿಸಲಿಲ್ಲ. ಅಷ್ಟು ದಿನಗಳ ಪ್ರೀತಿ ಸಣ್ಣ ಮಾತಿನಲ್ಲಿ ಕರಗೇ ಹೋಯ್ತು.
ಮರುದಿನವೇ ಗುಡ್ಬೈ ಕೂಡ ಹೇಳದೇ ಆಕೆ ಊರು ಬಿಟ್ಲು. ಇದಾದ ಆರು ವರ್ಷಗಳ ನಂತರ ಇಬ್ಬರು ರಸ್ತೆಯೊಂದರಲ್ಲಿ ಮುಖಾಮುಖಿಯಾದ್ರು. ಅಕ್ಕಪಕ್ಕದಲ್ಲಿಯೇ ಹೋದರೂ ಪರಿಚಯವಿಲ್ಲದವರಂತೆ ಹೊರಟು ಹೋದ್ರು. ಮತ್ತೆಂದೂ ಅವರು ಎದುರಾಗಲೇ ಇಲ್ಲ!
ಪ್ರೀತಿ ಒಂದು ದಿನದ ಕಥೆಯಲ್ಲ, ಜೀವನಪರ್ಯಂತ ಉಳಿಸಿಕೊಳ್ಳುವಂಥದ್ದು. ಅವರಿಬ್ಬರು ಮುಂದೆ ಏನಾದರು? ನಮಗೂ ಗೊತ್ತಿಲ್ಲ. ಬೇರೆ ಬೇರೆಯವರನ್ನು ಮದುವೆಯಾದ ಅವರ ಜೀವನ ಚೆನ್ನಾಗಿಯೂ ಇರಬಹುದು, ಕೆಟ್ಟದಾಗಿಯೂ ಇರಬಹುದು. ಆದರೆ ಇಬ್ಬರೂ ಒಟ್ಟಿಗೆ ಇದ್ದಿದ್ದರೆ ಹೇಗಿರುತ್ತಿತ್ತು ನಮಗೆ ಗೊತ್ತಷ್ಟೇ! ಪ್ರೀತಿ ಇದ್ದಲ್ಲಿ ಅಹಂ ಇರುವುದು ಬೇಡ, ಎರಡರಲ್ಲಿ ಒಂದಕ್ಕೆ ಮಾತ್ರ ಜಾಗ ನೀಡಿ!