ಹೊಸದಿಗಂತ ವರದಿ,ಹಾಸನ:
ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್ನಿಂದ ಯುವಕರಿಬ್ಬರು ದ್ವಿಚಕ್ರ ವಾಹನದಲ್ಲಿ ದಿನಸಿ ಇದ್ದ ಮೂಟೆಗಳನ್ನು ಸಾಗಿಸುತ್ತಿದ್ದ ವೇಳೆ ಸಿಕ್ಕಿ ಬಿದ್ದಿದ್ದು, ಅಲ್ಲಿನ ವಾರ್ಡನ್ ರಾತ್ರಿ ವೇಳೆ ದಿನಸಿ ಕಳ್ಳ ಸಾಗಾಟ ಮಾಡಿಸುತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.
ಆಲೂರು ಪಟ್ಟಣದಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಬಾಲಕರ ವಿದ್ಯಾರ್ಥಿ ನಿಲಯದಿಂದ ಮಕ್ಕಳಿಗೆ ಕೊಡಬೇಕಾದ ದಿನಸಿ ಹಾಗೂ ಇನ್ನಿತರ ಆಹಾರ ಪದಾರ್ಥಗಳನ್ನು ಕದ್ದು ಸಾಗಿಸುತ್ತಿದ್ದಾರೆ. ಕೇಳಲು ಹೋದರೆ ಮಕ್ಕಳಿಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ವಾರ್ಡನ್ ಕಾಂತರಾಜು ವಿರುದ್ಧ ಆರೋಪಗಳಿವೆ. ಇದಕ್ಕೆ ಸಾಕ್ಷಿ ಎಂಬoತೆ ಬುಧವಾರ ತಡರಾತ್ರಿ ಹಾಸ್ಟೆಲ್ಗೆ ಸಂಬoಧವಿಲ್ಲದ ಯುವಕರನ್ನು ಕರೆಸಿಕೊಂಡು ದಿನಸಿ ಹಾಗೂ ತರಕಾರಿಯನ್ನು ತನ್ನ ಮನೆಗೆ ವಾರ್ಡನ್ ಸಾಗಿಸುತ್ತಿದ್ದರು. ದಿನಸಿ ಇದ್ದ ಮೂಟೆ ಹಾಸ್ಟೆಲ್ನಿಂದ ಸಾಗಿಸುವ ವೇಳೆ ಸಿಕ್ಕಿಬಿದ್ದ ಇಬ್ಬರು ಯುವಕರು ಓಡಲು ಯತ್ನಿಸಿದರು. ಆ ದೃಶ್ಯಗಳನ್ನು ಹಾಸ್ಟೆಲ್ನ ವಿದ್ಯಾರ್ಥಿಗಗಳು ವೀಡಿಯೋ ಮಾಡಿಕೊಳ್ಳುತ್ತಿದ್ದಾಗ ಅಲ್ಲಿಯೇ ಇದ್ದ ವಾರ್ಡನ್ ಬೆದರಿಕೆ ಒಡ್ಡಿದರು ಎಂದೂ ಹೇಳಲಾಗಿದೆ.
ಕಳೆದ ಹಲವು ದಿನಗಳಿಂದ ಇದೇ ಕಳ್ಳಾಟಗಳು ನಡೆಯುತ್ತಿದ್ದು ಉತ್ತಮ ಗುಣಮಟ್ಟದ ದಿನಸಿ ಪದಾರ್ಥಗಳನ್ನು ಮನೆಗೆ ಕೊಂಡೊಯ್ದು ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಕಳಪೆ ಗುಣಮಟ್ಟದ ಊಟ ನೀಡಲಾಗುತ್ತಿದೆ. ಗುಣಮಟ್ಟದ ಆಹಾರ, ಹಾಲು, ಮೊಟ್ಟೆ ಎಲ್ಲವೂ ವಾರ್ಡನ್ ಮನೆ ಸೇರುತ್ತಿವೆ. ಈ ಬಗ್ಗೆ ಹಿರಿಯ ಅಧಿಕಾರಿಗಳು ಗಮನ ಹರಿಸಿ ವಾರ್ಡನ್ ವಿರುದ್ಧ ಸೂಕ್ತ ಕ್ರಮ ಕೈಗೊಂಡು ನಮಗೆ ಉತ್ತಮ ಗುಣಮಟ್ಟದ ಆಹಾರ ನೀಡಬೇಕು ಎಂದು ಹಾಸ್ಟೆಲ್ನ ಕೆಲವು ವಿದ್ಯಾರ್ಥಿಗಳು ಒತ್ತಾಯಿಸಿದ್ದಾರೆ.