ಹೊಸದಿಗಂತ ವರದಿ,ಮಡಿಕೇರಿ:
ಯಾತ್ರೆಯಲ್ಲಿ ತನ್ನ ಮಗ ಒಂಟಿಯಾಗುತ್ತಾನೆ ಎಂಬ ಭಯದಿಂದ ಸೋನಿಯಾ ಗಾಂಧಿ ಬಂದಿದ್ದು, ಮುಂದೆ ಜನರು ಅವರಿಗೆ ಉತ್ತರ ನೀಡಿ ಭಾರತ್ ಜೋಡೊ ಅಲ್ಲ ಭಾರತ್ ಛೋಡೊ ಎಂದು ಹೇಳಲಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಟೀಕಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ನವರಿಗೆ ಚಹಾ ಅಂಗಡಿ ಹೇಗಿರುತ್ತೆ ಅಂತ ಗೊತ್ತಿರಲಿಲ್ಲ. ಮಕ್ಕಳು ಹೇಗೆ ಬೆಳೆಯುತ್ತವೆ ಎನ್ನುವುದೂ ತಿಳಿದಿರಲಿಲ್ಲ. ಆದರೂ ಅವರು ಈಗ ಎಲ್ಲವನ್ನೂ ನೋಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಕಾಂಗ್ರೆಸ್ ಅನ್ನು ಮುಸ್ಲಿಮರು ಕೈಬಿಡುವುದಿಲ್ಲ ಎಂದು ಭಾವಿಸಿದ್ದರು. ಆದರೆ ಮುಸ್ಲಿಮರು ಕಾಂಗ್ರೆಸ್ ಬಿಡಲು ಶುರು ಮಾಡಿರುವುದರಿಂದ ಯಾತ್ರೆಯಲ್ಲಿ ಆರ್ಎಸ್ಎಸ್ ಮತ್ತು ಸಾವರ್ಕರ್ ಅವರನ್ನು ಬೈಯಲು ಕಾಂಗ್ರೆಸ್ಸಿಗರಿಗೆ ಶುರು ಮಾಡಿದ್ದಾರೆ ಎಂದು ಅವರು ನುಡಿದರು.
ಬಿಜೆಪಿಯವರಿಗೆ ಪಾದಯಾತ್ರೆಗಳು ಹೊಸದಲ್ಲ. ಆದರೆ ನಮ್ಮ ಹಲವು ಯಾತ್ರೆಗಳನ್ನು ಕಾಂಗ್ರೆಸ್ ಕಾಪಿ ಮಾಡುತ್ತಿದೆ. ಅವರು ಮತಕ್ಕಾಗಿ ಯಾತ್ರೆ ಆರಂಭಿಸಿದ್ದಾರೆ ಎಂದೂ ನಾಗೇಶ್ ದೂರಿದರು.
ಮಹರ್ಷಿ ವಾಲ್ಮೀಕಿಗೆ ಅವಮಾನ:ನನ್ನ ಕ್ಷೇತ್ರದಲ್ಲಿ ಜನರು ಮಹರ್ಷಿ ವಾಲ್ಮೀಕಿ ಭಾವಚಿತ್ರ ಇಟ್ಟುಕೊಂಡು ಕಾಯುತ್ತಿದ್ದರೂ ಗೌರವ ಸಮರ್ಪಿಸಲು ರಾಹುಲ್ ಗಾಂಧಿ ಮಾತ್ರವಲ್ಲ ಕನಿಷ್ಟ ರಾಜ್ಯದ ಕಾಂಗ್ರೆಸ್ ನಾಯಕರೂ ಬರಲಿಲ್ಲ. ಇದು ವಾಲ್ಮೀಕಿ ಅವರಿಗೆ ಮಾಡಿದ ಅವಮಾನ ಎಂದು ಬಿ.ಸಿ.ನಾಗೇಶ್ ಆರೋಪಿಸಿದರು.