ಹೊಸದಿಗಂತ ಡಿಜಿಟಲ್ ಡೆಸ್ಕ್:
ನೈರುತ್ಯ ಮಾನ್ಸೂನ್ ಸಾಮಾನ್ಯ ಆರಂಭದ ದಿನಾಂಕಕ್ಕಿಂತ ಮೂರು ದಿನಗಳ ಮುಂಚಿತವಾಗಿಯೇ ಇಂದು ಕೇರಳದಲ್ಲಿ ಆರಂಭವಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಈ ಹಿನ್ನೆಲೆ ಮುಂದಿನ 24 ಗಂಟೆಗಳಲ್ಲಿಕೇರಳ, ಕರ್ನಾಟಕ, ತಮಿಳುನಾಡು ಸೇರಿದಂತೆ ಹಿಮಾಲಯ, ಬಿಹಾರ, ಮತ್ತು ಪಶ್ಚಿಮ ಬಂಗಾಳದಲ್ಲಿ ಮುಂದಿನ ಮೂರ್ನಾಲ್ಕು ದಿನಗಳಲ್ಲಿ ಭಾರೀ ಮಳೆಯಾಗಲಿದೆ.
ಸಾಮಾನ್ಯವಾಗಿ ಜೂನ್ 1 ರಂದು ಮಾನ್ಸೂನ್ ಮಾರುತಗಳು ಕೇರಳ ಪ್ರವೇಶಿಸುವುದು ವಾಡಿಕೆ. ಈ ವರ್ಷ ಮೂರು ದಿನ ಮೊದಲೇ ಮಾನ್ಸೂನ್ ಪ್ರವೇಶವಾಗಿದೆ ಎಂದು ಐಎಂಡಿ ತಿಳಿಸಿದೆ.
ಕೇರಳ ಮತ್ತು ತಮಿಳುನಾಡಿನಲ್ಲಿ ಭಾರೀ ಮಳೆಯನ್ನು ತರಿಸಲಿದ್ದು, ಬಂಗಾಳ ಕೊಲ್ಲಿ ಕರಾವಳಿಯಲ್ಲೂ ಮುಂದಿನ ಎರಡು ದಿನಗಳಲ್ಲಿ ಮಳೆ ಬೀಳಲಿದೆ.ಅರಬ್ಬೀ ಸಮುದ್ರದಲ್ಲಿ ಭಾರೀ ಬಿರುಗಾಳಿ ಸಹಿತ ಮಳೆಯಾಗಲಿದ್ದು, ಕರ್ನಾಟಕ ಕರಾವಳಿಯಲ್ಲೂ ಎಚ್ಚರಿಕೆ ನೀಡಲಾಗಿದೆ. ಅಂಡಮಾನ್ ಮತ್ತು ನಿಕೋಬಾರ್, ಲಕ್ಷದ್ವೀಪದಲ್ಲೂ ಮಳೆ ಪ್ರಮಾಣ ಹೆಚ್ಚಿರಲಿದೆ ಎಂದು ಎಚ್ಚರಿಕೆ ನೀಡಿದೆ.
ಕರ್ನಾಟಕ, ಆಂದ್ರ ಪ್ರದೇಶ ಮತ್ತು ತೆಲಂಗಾಣದಲ್ಲಿ ಮುಂದಿನ 24 ಗಂಟೆಯೊಳಗೆ ಮಳೆಯಾಗಲಿದ್ದು, ತಮಿಳುನಾಡು, ಪುದುಚೇರಿ ಮತ್ತು ಕರೈಕಲ್ನಲ್ಲಿ ಐದು ದಿನದ ನಂತರ ಭಾರೀ ಮಳೆಯಾಗಲಿದೆ ಎಂದು ತಿಳಿಸಿದೆ.
ಸದ್ಯ ಮಾನ್ಸೂನ್ ಮಾರುತಗಳು 40-50 ಕಿಮೀ ವೇಗದಲ್ಲಿದ್ದು, ಇದು ತನ್ನ ವೇಗವನ್ನು ಮತ್ತಷ್ಟು ಹೆಚ್ಚಿಸಿ, ಭಾರೀ ಬಿರುಗಾಳಿ ಸಹಿತ ಮಳೆಯಾಗಲಿದೆ . ಒಟ್ಟಾರೆ ಈ ಬಾರಿಯ ಮಾನ್ಸೂನ್ ದೇಶಾದ್ಯಂತ ಉತ್ತಮ ಮಳೆ ತರಿಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.