Sunday, December 10, 2023

Latest Posts

ಕ್ರೀಡೆ ಸ್ಫೂರ್ತಿದಾಯಕ ಕ್ಷೇತ್ರ: ಸಚಿವ ಡಾ.ಹೆಚ್.ಸಿ.ಮಹದೇವಪ್ಪ

ಹೊಸದಿಗಂತ ವರದಿ,ಮೈಸೂರು:

ಪ್ರಪಂಚದಲ್ಲಿ ಕ್ರೀಡೆಯು ಮಹತ್ವದ ಸ್ಥಾನ ಪಡೆದಿದ್ದು, ಪ್ರತಿಯೊಬ್ಬರಿಗೂ ಸ್ಪೂರ್ತಿದಾಯಕ ಕ್ಷೇತ್ರವಾಗಿದೆ ಎಂದು ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ತಿಳಿಸಿದರು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕರ್ನಾಟಕ ಒಲಂಪಿಕ್ ಸಂಸ್ಥೆ ಮತ್ತು ದಸರಾ ಕ್ರೀಡಾ ಉಪಸಮಿತಿ ವತಿಯಿಂದ ಶನಿವಾರ ಚಾಮುಂಡಿ ವಿಹಾರ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ರಾಜ್ಯಮಟ್ಟದ ದಸರಾ ಕ್ರೀಡಾಕೂಡ ಮತ್ತು ಸಿಎಂ ಕಪ್-2023 ಕ್ರೀಡೆಯ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದ ಅವರು,

ಕ್ರೀಡೆಯು ಮನುಷ್ಯನ ಭಾವನೆಗಳನ್ನು ಕ್ಷಣಾರ್ಧದಲ್ಲಿ ಬದಲಿಸುವ ಶಕ್ತಿ ಹೊಂದಿದೆ. ಬಹುಮುಖ್ಯವಾಗಿ ಕ್ರೀಡೆಗೆ ಕಠಿಣವಾದ ಪರಿಶ್ರಮ ಅಗತ್ಯ. ಅದಕ್ಕೆ ಉತ್ತೇಜನ ಮತ್ತು ಪ್ರೋತ್ಸಾಹ ಹಾಗೂ ಅಗತ್ಯ ಸವಲತ್ತುಗಳನ್ನು ನೀಡಿದಾಗ ಉತ್ತಮ ಕ್ರೀಡಾಪಟುಗಳು ರೂಪುಗೊಳ್ಳುತ್ತಾರೆ. ಈ ಎಲ್ಲಾ ಸೌಕರ್ಯವನ್ನು ಸರ್ಕಾರ ಒದಗಿಸಿಕೊಡಲಿದೆ ಎಂದು ಭರವಸೆ ನೀಡಿದರು.

ಮೈಸೂರು ದಸರಾ ಮಹೋತ್ಸವಲ್ಲಿ ಪ್ರಮುಖವಾಗಿ ಕಳೆಗಟ್ಟುವ ವೇದಿಕೆ ದಸರಾ ಕ್ರೀಡಾಕೂಟವಾಗಿದೆ. ಈ ಕ್ರೀಡೆಯಲ್ಲಿ ಭಾಗವಹಿಸಿದ ಎಲ್ಲಾ ಕ್ರೀಡಾಪಟುಗಳಿಗೆ ಸರ್ಕಾರ ಅಭಿನಂದಿಸುತ್ತದೆ. ಈ ಎಲ್ಲರೂ ಕೂಡ ರಾಷ್ಟ್ರೀಯ, ಅಂತಾರಾಷ್ಟ್ರೀಯ ಕ್ರೀಡೆಯಲ್ಲಿ ಭಾಗವಹಿಸಿ ಭಾರತದ ತ್ರಿವರ್ಣ ಧ್ವಜವನ್ನು ಹಾರಿಸುವ ಮೂಲಕ ಸೌಹರ್ದತೆ, ಅಖಂಡತೆ ಮತ್ತು ಬಹುತ್ವವನ್ನು ರಕ್ಷಣೆ ಮಾಡುವುದು ನಿಮ್ಮ ಜವಬ್ದಾರಿ ಎಂದು ತಿಳಿಸಿದರು.

ದಸರಾ ಕ್ರೀಡಾಕೂಟದಲ್ಲಿ ಹತ್ತು ಸಾವಿರ ಕ್ರೀಡಾಪಟುಗಳು ಭಾಗವಹಿಸಿ, ಕ್ರೀಡಾಂಗದಲ್ಲಿ ಅತ್ಯುತ್ತಮವಾದ ಪ್ರದರ್ಶನ ನೀಡಿದ್ದಾರೆ. ಸೋಲು, ಗೆಲುವಿನ ಲೆಕ್ಕಚಾರ ಹಾಕದೆ ಕ್ರೀಡೆಯಲ್ಲಿ ಸಕ್ರಿಯವಾಗಿ ಭಾಗವಹಿಸುವುದು ಮುಖ್ಯ. ಕ್ರೀಡೆಯಲ್ಲಿ ಸಾಧನೆ ಮಾಡಿದಂತಹ ಸಾಧಕರ ಗುರಿ ನಿಮ್ಮದಾಗಬೇಕು. ಸೋಲೇ ಗೆಲುವಿನ ಸೋಪಾನ ಎಂದು ಭಾವಿಸಿ ಮರಳಿ ಪ್ರಯತ್ನ ಮಾಡಬೇಕು ಎಂದು ಕಿವಿಮಾತು ಹೇಳಿದರು.

ಭಾರತದ ಭೂಪಟದಲ್ಲಿ ಅಚ್ಚಳಿಯದೆ ಮೈಸೂರು ಸಾಂಸ್ಕೃತಿಕ ನಗರದ ಎಂಬ ಹೆಗ್ಗಳಿಕೆ ಉಳಿಯಬೇಕಾದರೆ ನಾಲ್ವಡಿ ಕೃಷ್ಣರಾಜ ಒಡೆಯರ ಮುತ್ಸದ್ಧಿತನ, ಸೂಕ್ಷ್ಮತೆ, ದೂರದೃಷ್ಟಿ ಮುಖ್ಯಕಾರಣ. ಅವರು ಬೆಂಬಲಿಸದ ಯಾವುದೇ ಕ್ಷೇತ್ರ ಉಳಿದಿಲ್ಲ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ಬಿ.ನಾಗೇಂದ್ರ, ಶಾಸಕ ತನ್ವೀರ್ ಸೇಠ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಡಾ.ಕೆ.ಗೋವಿಂದರಾಜು, ಒಲಂಪಿಕ್ ಸಂಸ್ಥೆಯ ಕಾರ್ಯದರ್ಶಿ ಆನಂತ್ ರಾಜ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಯುಕ್ತ ಎನ್.ಶಶಿಕುಮಾರ್, ಉಪಸಮಿತಿ ಅಧ್ಯಕ್ಷ ಶಿವಣ್ಣ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!