ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಯೋಧ್ಯೆಯಲ್ಲಿ ಶ್ರೀರಾಮ ಮತ್ತೆ ಪಟ್ಟಕ್ಕೇರಿದ್ದಾನೆ. ಈ ಅಪೂರ್ವ ಕ್ಷಣವನ್ನು ಕಣ್ತುಂಬಿಕೊಂಡು ಭಕ್ತರು ಧನ್ಯತಾಭಾವ ಮೆರೆದಿದ್ದಾರೆ. ‘ಹೇ ರಾಮ’ ನಮ್ಮ ಜನ್ಮ ಸಾರ್ಥಕವಾಯಿತು ಎಂದು ಜನ ಭಕ್ತಿಯ ಪರಾಕಾಷ್ಠೆ ಮೆರೆದರು.
ರಾಮಮಂದಿರದ ಗರ್ಭಗುಡಿಯಲ್ಲಿ ಬಾಲರಾಮ ವಿರಾಜಮಾನನಾದ. ಆತನ ತೇಜಸ್ವಿ ಕಣ್ಣುಗಳು ಪುಣ್ಯಭೂಮಿ ಭಾರತವನ್ನು ನೋಡುತ್ತಿವೆ. ಮಂದಸ್ಮಿತನಾದ ಬಾಲರಾಮ ತನ್ನ ಭಕ್ತರನ್ನು ಕಂಡು ಹರಸುತ್ತಿದ್ದಾನೆ. 500 ವರ್ಷಗಳ ಬಳಿಕ ಕೊನೆಗೂ ಭಗವಾನ್ ರಾಮ ಭಕ್ತರಿಗೆ ದರ್ಶನ ನೀಡಿದ್ದಾನೆ. ಎಲ್ಲೆಡೆ ‘ಜೈ ಶ್ರೀರಾಮ್’ ಘೋಷಣೆ ಮೊಳಗುತ್ತಿವೆ. . ಬಾಲರಾಮನ ಮುಖಾರವಿಂದ ಕಣ್ತುಂಬಿಕೊಂಡು ಭಕ್ತರು ಭಕ್ತಿಯಲ್ಲಿ ಕಳೆದು ಹೋಗಿದ್ದಾರೆ.
ಇಂದು ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಅಯೋಧ್ಯೆಯಲ್ಲಿ ಶಾಸ್ತ್ರೋಕ್ತವಾಗಿ ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ನೆರವೇರಿಸಲಾಯಿತು. ಮೈ ತುಂಬಾ ಆಭರಣಗಳೊಂದಿಗೆ ಮಿಂಚುತ್ತಿರುವ ರಾಮ ಮಂದಹಾಸ ಬೀರುತ್ತಿರುವುದನ್ನು ನೋಡಿದ್ರೆ ಒಂದು ಬಾರಿ ಕಣ್ತುಂಬಿ ಬರುತ್ತೆ. ಹಣೆಯಲ್ಲಿ ನಾಮ, ತಲೆಯಲ್ಲಿ ಕಿರೀಟ, ಬಾಣ ಹಾಗೂ ಬಿಲ್ಲು ರಾಮನ ಕೈಯಲ್ಲಿದೆ. ಒಟ್ಟಿನಲ್ಲಿ ಸರ್ವಾಲಂಕಾರಭೂಷಿತನಾಗಿರುವ ಅಯೋಧ್ಯೆಯ ಶ್ರೀರಾಮನನ್ನು ನೋಡುವುದೇ ಆನಂದ.
ರಾಮನ ಕಣ್ಣುಗಳ ಬಗ್ಗೆ ವರ್ಣಿಸಲು ಪದಗಳೇ ಸಾಲದು. ಆ ಕಣ್ಣುಗಳನ್ನು ನೋಡುತ್ತಿದ್ದರೆ ಸಾಕ್ಷಾತ್ ರಾಮನೇ ಬಂದು ನಿಂತು ಭಕ್ತರನ್ನು ನೋಡಿ ಮಂದಹಾಸ ಬೀರುವಂತಿದೆ.ಒಟ್ಟಿನಲ್ಲಿ ತಲೆತಲಾಂತರಗಳಿಂದ ಕಾಯುತ್ತಿದ್ದ ರಾಮಭಕ್ತರು ಇಂದು ಧನ್ಯತಾ ಭಾವ ಮೆರೆದಿದ್ದಾರೆ.