ಹೊಸದಿಗಂತ ವರದಿ,ಮೇಲುಕೋಟೆ:
ಕೊರೆಯುವ ಚಳಿ, ತುಂತುರು ಮಳೆ ವಾತಾವರಣದ ನಡುವೆ ಐತಿಹಾಸಿಕ ಮಹತ್ವದ ಶ್ರೀಕೃಷ್ಣರಾಜಮುಡಿ ಕಿರೀಟಧಾರಣ ಮಹೋತ್ಸವ ವೈಭವದಿಂದ ನೆರವೇರಿತು . ಆಷಾಡ ಜಾತ್ರೆ ಕೃಷ್ಣರಾಜಮುಡಿ ಬ್ರಹ್ಮೋತ್ಸವದ ನಾಲ್ಕನೇ ದಿನವಾದ ಶುಕ್ರವಾರ ರಾತ್ರಿ 8.30ಕ್ಕೆ ಶ್ರೀಚೆಲುವನಾರಾಯಣಸ್ವಾಮಿಗೆ ಕೃಷ್ಣರಾಜಮುಡಿ ಕಿರೀಟ ತೊಡಿಸಿ ವೈಭವದಿಂದ ತಿರುವೀದಿಗಳಲ್ಲಿ ವಿಜೃಭಣೆಯಿಂದ ಉತ್ಸವ ನೆರವೇರಿಸಲಾತು.
ಜಿಲ್ಲಾಖಜಾನೆಯಿಂದ ಪೊಲೀಸ್ ಭದ್ರತೆಯೊಂದಿಗೆ ತಂದ ಶ್ರೀ ಕೃಷ್ಣರಾಜಮುಡಿ ತಿರುವಾಭರಣಪೆಟ್ಟಿಗೆಯನ್ನು ಮಳೆ ನೀರು ನಿಂತಿದ್ದ ಕಾರಣ ದೇಶಿಕರ ಸನ್ನಿದಿಯ ಬದಲು ದೇವಾಲಯದಲ್ಲೇ ಪಾರ್ಕಾವಣೆ ಮಾಡಿ ತೆರೆದು ವಜ್ರಖಚಿತ ಕೃಷ್ಣರಾಜಮುಡಿ ಮತ್ತು ಗಂಡುಬೇರುಂಡ ಪದಕವನ್ನು ಪಾಂಡವಪುರ ಉಪವಿಭಾಗಾಧಿಕಾರಿ ನಂದೀಶ್ ಸ್ಥಾನೀಕರು, ಅರ್ಚಕ ಪರಿಚಾರಕರ ಸಮ್ಮುಖದಲ್ಲಿ ಪರಿಶೀಲನೆ ಮಾಡಿದ ನಂತರ ಅರ್ಧಚಂದ್ರಪ್ರಭಾವಳಿಯಲ್ಲಿ ಭವ್ಯ ಪುಪ್ಪಗಳಿಂದ ಅಲಂಕೃತನಾಗಿ ಶ್ರೀದೇವಿಭೂದೇವಿ ಅಮ್ಮನವರ ಸಮೇತಗರುಡರೂಢನಾದ ಶ್ರೀ ಚೆಲುವನಾರಾಯಣಸ್ವಾಮಿಗೆ ವಜ್ರಖಚಿತ ಶ್ರೀಕೃಷ್ಣರಾಜಮುಡಿಕಿರೀಟಧಾರಣೆ ಮಾಡಲಾಯಿತು.