ಹೊಸದಿಗಂತ ಡಿಜಿಟಲ್ ಡೆಸ್ಕ್:
ದ್ವೀಪ ರಾಷ್ಟ್ರ ಶ್ರೀಲಂಕಾ ಆರ್ಥಿಕ ಪರಿಸ್ಥಿತಿ ದಿನದಿಂದ ದಿನಕ್ಕೆ ಪಾತಾಳಕ್ಕಿಳಿಯುತ್ತಿದೆ. ವಿಶೇಷವಾಗಿ ಇಂಧನ ಕೊರತೆ ದೇಶವನ್ನು ಕಾಡುತ್ತಿದೆ. ಪೆಟ್ರೋಲ್ ಬಂಕ್ಗಳಲ್ಲಿ ಕ್ಯಾನ್ಗಳನ್ನು ಹಿಡಿದು ಜನ ದಿನಗಟ್ಟಲೆ ಗಬ್ಬೆದ್ದು ಕಾಯುವ ದುಸ್ಥಿತಿ ಎದುರಾಗಿದೆ. ತೀವ್ರ ಇಂಧನ ಕೊರತೆಯ ಹಿನ್ನೆಲೆಯಲ್ಲಿ ಶ್ರೀಲಂಕಾ ಸರ್ಕಾರ ಅಲ್ಲಿನ ಶಾಲೆ ಹಾಗೂ ಕಚೇರಿಗಳನ್ನು ತಾತ್ಕಾಲಿಕವಾಗಿ ಬಂದ್ ಮಾಡುವಂತೆ ಆದೇಶಿಸಿದೆ.
ತುರ್ತು ಸೇವೆಗಳನ್ನು ಹೊರತುಪಡಿಸಿ ಯಾವುದೇ ಸರ್ಕಾರಿ ನೌಕರರು ಕಚೇರಿಗಳಿಗೆ ಬರಬಾರದು ಎಂದು ಸೂಚಿಸಲಾಗಿದೆ. ಶುಕ್ರವಾರ ಖಾಸಗಿ ಶಾಲೆಗಳನ್ನು ಮುಚ್ಚುವಂತೆಯೂ ಆದೇಶಿಸಿದೆ. ಮತ್ತೊಂದೆಡೆ ಪೆಟ್ರೋಲ್ ಹೊರತಾಗಿ ಇತರ ಇಂಧನಗಳ ಕೊರತೆಯೂ ಶ್ರೀಲಂಕಾವನ್ನು ಕಾಡುತ್ತಿದೆ. ಇಂಧನ ಆಮದುಗಳಿಗೆ ಡಾಲರ್ ಕೊರತೆಯಿಂದಾಗಿ ಅಂತಾರಾಷ್ಟ್ರೀಯ ಸಂಸ್ಥೆಗಳು, ವಿದೇಶಿ ನೆರವಿಗಾಗಿ ಶ್ರೀಲಂಕಾ ಸರ್ಕಾರ ಎದುರು ನೋಡುತ್ತಿದೆ. ಹೀಗಿರಬೇಕಾದರೆ, ಪ್ರಸ್ತುತ ಶ್ರೀಲಂಕಾ ದೇಶ ಆರಂಭಿಕ ದಿವಾಳಿತನದ ಸ್ಥಿತಿಯಲ್ಲಿದೆ ಎಂದು ರಿಸರ್ವ್ ಬ್ಯಾಂಕ್ ಗವರ್ನರ್ ನಂದಲಾಲ್ ಆತಂಕಕಾರಿ ಹೇಳಿಕೆ ನೀಡಿದ್ದಾರೆ.