ಹೊಸದಿಗಂತ ವರದಿ, ವಿಜಯಪುರ:
ಮಾಜಿ ಸಚಿವ ಶ್ರೀರಾಮುಲು ಅವರಿಗೆ ಅವರ ಪಕ್ಷದಲ್ಲಿ ಏನು ನಡೆದಿದೆ ಎಂಬುದು ಗೊತ್ತಿಲ್ಲ ಎಂಬಂತೆ ಕಾಣುತ್ತಿದೆ ಎಂದು ಜವಳಿ, ಸಕ್ಕರೆ, ಎಪಿಎಂಸಿ ಖಾತೆ ಸಚಿವ ಶಿವಾನಂದ ಪಾಟೀಲ ದೂರಿದರು.
ಸಿದ್ದರಾಮಯ್ಯ- ಡಿಕೆಶಿ ಮಧ್ಯೆ ಗಲಾಟೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ತಮ್ಮ ಮಗನನ್ನು ಮುಖ್ಯಮಂತ್ರಿ ಮಾಡಲು ಹೊರಟಿದ್ದಾರೆ ಎಂಬ ಶ್ರೀರಾಮುಲು ಹೇಳಿಕೆ ವಿಚಾರಕ್ಕೆ ನಗರದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿ, ತಮಗೆ ಗೊತ್ತಿದೆಯಲ್ಲ, ಅದನ್ನು ಮೊದಲು ಶ್ರೀರಾಮುಲು ಅವರು ಸರಿ ಮಾಡಿಕೊಳ್ಳಲಿ ಎಂದರು.
ನಮ್ಮಲ್ಲಿ ಬಹಳ ಜನ ಮುಖ್ಯಮಂತ್ರಿಗಳಾಗಬೇಕು ಎಂಬ ಅಭ್ಯರ್ಥಿಗಳು ಇದ್ದಾರೆ. ತಪ್ಪೇನಿದೆ ಆಸೆ ಪಟ್ಟರೆ, ಆದರೆ ನನಗೆ ಆ ಆಸೆ ಇಲ್ಲ. ನನಗಂತೂ ಇಷ್ಟೇ ಸಾಕು ಎಂದರು.
ಬಿಜೆಪಿಯವರಿಂದ ಜನಾಕ್ರೋಶ ರ್ಯಾಲಿ ವಿಚಾರಕ್ಕೆ ಪ್ರತಿಕ್ರಿಯಿಸಿ, ಅವರೇನು ಮಾಡಬೇಕು ಮನೆಯಲ್ಲಿ ಕೂಡಬೇಕಾ ?, ನಾವು ಕೂಡ ಕೇಂದ್ರ ಸರ್ಕಾರದ ವಿರುದ್ಧ ಮಾಡುತ್ತಿಲ್ಲವಾ ?, ವಿರೋಧ ಪಕ್ಷವಾಗಿ ಕೆಲಸ ಮಾಡುವುದು ತಪ್ಪೇನು ? ಇದರಿಂದ ಕಾಂಗ್ರೆಸ್ ಗೆ ಯಾವುದೇ ಹಿನ್ನೆಡೆಯಾಗಲ್ಲ ಎಂದರು.