ಬಿಗ್‌ ಬಾಸ್‌ ನಿರೂಪಣೆಗೆ ಗುಡ್‌ಬೈ ಎಂದ ಸ್ಟಾರ್‌ ನಟ: ಈ ನಿರ್ಧಾರಕ್ಕೆ ಕಾರಣವೇನು?

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಕಳೆದ 7 ವರ್ಷಗಳಿಂದ ‘ಬಿಗ್​ ಬಾಸ್​ ತಮಿಳು’ ರಿಯಾಲಿಟಿ ಶೋ ನಿರೂಪಣೆ ಮಾಡುತ್ತಾ ಬಂದಿರುವ ನಟ ಕಮಲ್​ ಹಾಸನ್ ಅಭಿಮಾನಿಗಳಿಗೆ ಒಂದು ಬ್ಯಾಡ್​ ನ್ಯೂಸ್​ ನೀಡಿದ್ದಾರೆ.

ಅದೇನೆಂದ್ರೆ ಈ ಬಾರಿ ತಾವು ಬಿಗ್​ ಬಾಸ್​ ಕಾರ್ಯಕ್ರಮವನ್ನು ನಡೆಸಿಕೊಡುವುದಿಲ್ಲ ಎಂದು ನೇರವಾಗಿಯೇ ಹೇಳಿದ್ದಾರೆ. ತಮ್ಮ ಈ ನಿರ್ಧಾರಕ್ಕೆ ಕಾರಣ ಏನು ಎಂಬುದನ್ನು ಕೂಡ ಕಮಲ್​ ಹಾಸನ್​ ವಿವರಿಸಿದ್ದಾರೆ.

ಬಿಗ್​ ಬಾಸ್​ ನಿರೂಪಕರ ಬದಲಾವಣೆ ಕುರಿತು ಅಂತೆ-ಕಂತೆಗಳು ಕೇಳಿಬರುವುದು ಸಹಜ. ಆದರೆ ಈಗ ಕಮಲ್​ ಹಾಸನ್​ ಬಗ್ಗೆ ಕೇಳಿಬಂದಿರುವ ವಿಷಯ ಗಾಸಿಪ್​ ಅಲ್ಲ. ಸ್ವತಃ ಕಮಲ್​ ಹಾಸನ್​ ಅವರು ಸೋಶಿಯಲ್​ ಮೀಡಿಯಾದಲ್ಲಿ ಪೋಸ್ಟ್​ ಮಾಡುವ ಮೂಲಕ ಈ ವಿಷಯ ತಿಳಿಸಿದ್ದಾರೆ.

‘7 ವರ್ಷಗಳ ಹಿಂದೆ ಶುರುವಾದ ನಮ್ಮ ಬಿಗ್​ ಬಾಸ್​ ಪಯಣಕ್ಕೆ ಬ್ರೇಕ್​ ನೀಡಲು ನಿರ್ಧರಿಸಿದ್ದೇನೆ ಎಂದು ಭಾರವಾದ ಹೃದಯದಿಂದ ನಿಮಗೆ ತಿಳಿಸುತ್ತಿದ್ದೇನೆ. ಈ ಮೊದಲೇ ಒಪ್ಪಿಕೊಂಡ ಸಿನಿಮಾಗಳ ಕೆಲಸದ ಕಾರಣದಿಂದ ನನಗೆ ಈ ಬಾರಿಯ ಬಿಗ್​ ಬಾಸ್​ ಶೋ ನಿರೂಪಣೆ ಮಾಡಲು ಸಾಧ್ಯವಾಗುತ್ತಿಲ್ಲ’ ಎಂದು ಕಮಲ್​ ಹಾಸನ್​ ಹೇಳಿದ್ದಾರೆ.

‘ನಿಮ್ಮ ಮನೆಗಳನ್ನು ತಲುಪುವ ಅವಕಾಶ ನನಗೆ ಸಿಕ್ಕಿತ್ತು. ನೀವು ನನಗೆ ಪ್ರೀತಿ ನೀಡಿದ್ದೀರಿ. ಅದಕ್ಕಾಗಿ ನಾನು ಚಿರಋಣಿ. ನಿಮ್ಮ ಬೆಂಬಲದಿಂದಾಗಿ ಬಿಗ್​ ಬಾಸ್​ ತಮಿಳು ರಿಯಾಲಿಟಿ ಶೋ ನನ್ನ ಪಾಲಿನ ಬೆಸ್ಟ್​ ಶೋ ಆಯಿತು. ಕಲಿಕೆಯ ಅನುಭವ ನೀಡಿದ ಈ ಕಾರ್ಯಕ್ರಮಕ್ಕಾಗಿ ನಾನು ಋಣಿ ಆಗಿದ್ದೇನೆ. ನಿಮ್ಮೆಲ್ಲರಿಗೆ ಹಾಗೂ ಸ್ಪರ್ಧಿಗಳಿಗೆ ನಾನು ಧನ್ಯವಾದ ಅರ್ಪಿಸುತ್ತೇನೆ’ ಎಂದು ಪತ್ರದಲ್ಲಿ ಬರೆದಿದ್ದಾರೆ ಕಮಲ್​ ಹಾಸನ್​.

ಹೊಸ ಸೀಸನ್​ಗೆ ಯಾರು ನಿರೂಪಣೆ ಮಾಡುತ್ತಾರೆ ಎಂಬ ಮಾಹಿತಿಯನ್ನು ವಾಹಿನಿಯವರು ಇನ್ನಷ್ಟೇ ನೀಡಬೇಕಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!