ಹೊಸದಿಗಂತ ವರದಿ ಹುಬ್ಬಳ್ಳಿ:
ನಗರದ ಸ್ವರ್ಣ ಮಯೂರಿ ಸಾಂಸ್ಕೃತಿಕ ಸಂಸ್ಥೆಯ 17 ನೇ ವಾರ್ಷಿಕೋತ್ಸವದ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ರಾಜ್ಯಮಟ್ಟದ ಜನಪದ ಕನ್ನಡೋತ್ಸವ – 2022ಅನ್ನು ನ.19 ರಂದು ಮಧ್ಯಾಹ್ನ 3.30 ಕ್ಕೆ ದೇಶಪಾಂಡೆ ನಗರದ ಸವಾಯಿ ಗಂಧರ್ವ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸ್ವರ್ಣ ಮಯೂರಿ ಸಾಂಸ್ಕೃತಿಕ ಸಂಸ್ಥೆಯ ಅಧ್ಯಕ್ಷ ಚನ್ನಯ್ಯಾ ವಸ್ತ್ರದ ಹೇಳಿದರು.
ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಧಾರವಾಡ ಜಿಲ್ಲೆಯ ಜಾನಪದ ನೃತ್ಯ, ಸಂಗೀತ, ಜಗ್ಗಲಗಿ, ಡೊಳ್ಳು ಕುಣಿತ, ತಬಲಾ ಹಾಗೂ ವಾಯೋಲಿನ್ ಜುಗಲ್ ಬಂದಿ, ಕೊಳಲು ವಾದನ, ಹಂತಿ ಪದ, ಜನಪದ ಸಂಗೀತ, ಕನ್ನಡ ನಾಡು-ನುಡಿ ನೃತ್ಯಗಳು ಸೇರಿದಂತೆ ಒಟ್ಟು 16 ಕಲಾ ತಂಡಗಳ ಪ್ರದರ್ಶನ ನಡೆಯಲಿದೆ ಎಂದರು.
ವಾರ್ಷಿಕೋತ್ಸವದ ಉದ್ಘಾಟನೆಯನ್ನು ಶಾಸಕ ಪ್ರಸಾದ್ ಅಬ್ಬಯ್ಯ ಮಾಡಲಿದ್ದು, ಮುಖ್ಯ ಅತಿಥಿಗಳಾಗಿ ರೋಟರಿ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲ ಸ್ಯಾಂಡ್ರಾ ಫೋನ್ಸೇಕಾ, ಬಿಜೆಪಿ ಮುಖಂಡ ಪ್ರಭು ನವಲಗುಂದಮಠ, ರಾಜು ಜರತಾರಘರ ಸೇರಿದಂತೆ ಮುಂತಾದ ಗಣ್ಯಮಾನ್ಯರು ಭಾಗಿಯಾಗಲಿದ್ದಾರೆ. ಘನ ಉಪಸ್ಥಿತಿಯನ್ನು ಹು-ಧಾ ಮಹಾನಗರ ಪಾಲಿಕೆ ಮಹಾಪೌರ ವಿರೇಶ ಅಂಚಟಗೇರಿ, ಸಿದ್ದಾರೂಢ ಸ್ವಾಮಿ ಮಠದ ಮಾಜಿ ಚೇರಮನ್ ಮಹೇಂದ್ರ ಸಿಂಘಿ, ಬಿಜೆಪಿ ರಾಜ್ಯ ಪ್ರಕೋಷ್ಠಗಳ ಸಂಚಾಲಕ ಚಂದ್ರಶೇಖರ ಗೋಕಾಕ್ ವಹಿಸಲಿದ್ದಾರೆ. ಇದರ ಜೊತೆಗೆ ಧಾರವಾಡ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ ಬೇಕ್ಕೇರಿ, ಬಂಗಾರೇಶ ಹಿರೇಮಠ, ಜಾನಪದ ತಜ್ಞ ಡಾ.ರಾಮು ಮೂಲಗಿ ಭಾಗವಹಿಸುವರು ಎಂದು ತಿಳಿಸಿದರು.
ಇದೇ ವೇಳೆ ಧಾರವಾಡ ಜಿಲ್ಲಾ ಸರ್ವ ಕಲಾವಿದರ ಪರಿಚಯ ಪುಸ್ತಕದ ಮುಖಪುಟ ಬಿಡುಗಡೆ ಮಾಡಲಾಗುವುದು ಎಂದರು.