ಹೊಸದಿಗಂತ ವರದಿ ಶಿರಸಿ:
ರಾಜ್ಯದ ಮೊದಲ ಪರಿಸರ ವಿದ್ಯಾಲಯವನ್ನು ಶಿರಸಿಯಲ್ಲಿ ಸ್ಥಾಪಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ನಗರದಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲು ರವಿವಾರ ನಗರಕ್ಕೆ ಆಗಮಿಸಿದ ಸಿಎಂ ಇಲ್ಲಿನ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಅರಣ್ಯ ರಕ್ಷಣೆ ಜತೆ ಅಭಿವೃದ್ಧಿ ದೃಷ್ಟಿಕೋನದೊಂದಿಗೆ ರಾಜ್ಯದಲ್ಲಿ ಮೊದಲ ಎನ್ವೈರ್ನ್ಮೆಂಟ್ (ಪರಿಸರ) ವಿಶ್ವವಿದ್ಯಾಲಯವನ್ನು ಶಿರಸಿಯಲ್ಲಿ ಸ್ಥಾಪಿಸಲಾಗುವುದು ಎಂದರು.
ತೋಟಗಾರಿಕೆ, ಅರಣ್ಯ ಕಾಲೇಜು ಇಲ್ಲಿದೆ. ಇವುಗಳನ್ನು ವಿಲೀನಗೊಳಿಸಿ ವನ್ಯಜೀವಿ ರಕ್ಷಣೆ, ಪರಿಸರ ಸಂರಕ್ಷಣೆ, ಕೃಷಿ ಸೇರಿದಂತೆ ಪರಿಸರ ಪೂರಕ ಅಧ್ಯಯನಗಳಿಗೆ ಅನುಕೂಲವಾಗುವಂತೆ ವಿಶ್ವವಿದ್ಯಾಲಯ ಸ್ಥಾಪನೆ ಮಾಡಬೇಕು. ಬಜೆಟ್ ನಲ್ಲಿ ಇದಕ್ಕಾಗಿ ಅನುದಾನ ಘೋಷಿಸಲಾಗುವುದು ಎಂದರು.
ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಸಚಿವರಾದ ಶಿವರಾಮ ಹೆಬ್ಬಾರ, ಕೋಟ ಶ್ರೀನಿವಾಸ ಪೂಜಾರಿ, ಸಿ.ಸಿ.ಪಾಟೀಲ ಸೇರಿದಂತೆ ಇತರರು ಇದ್ದರು.