ಹೊಸದಿಗಂತ ವರದಿ ಮುಂಡಗೋಡ:
ಕಾಡಿನಿಂದ ಆಹಾರ ಅರಸಿ ಬಂದ ಜಿಂಕೆ ಮೇಲೆ ಬೀದಿನಾಯಿಗಳು ದಾಳಿ ನಡೆಸಿ ಗಂಭೀರ ಗಾಯಗೊಳಿಸಿರುವ ಘಟನೆ ಮುಂಡಗೋಡದಲ್ಲಿ ನಡೆದಿದೆ. ನಾಯಿದಾಳಿಗೆ ಜಿಂಕೆಯ ಎರಡು ಕಾಲುಗಳು ದೇಹದಿಂದ ಬೇರ್ಪಟ್ಟು ನಡೆಯಲಾಗದ ಸ್ಥಿತಿಯಲ್ಲಿದೆ.
ಉತ್ತರಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಸನವಳ್ಳಿ ಗ್ರಾಮದ ಸನಿಹವಿರುವ ಅರಣ್ಯದಿಂದ ಜಿಂಕೆಯೊಂದು ಆಹಾರ ಅರಸಿ ಗ್ರಾಮದ ಗದ್ದೆಯ ಕಡೆ ಬಂದಿದೆ. ಅದನ್ನು ಕಂಡ ಬೀದಿ ನಾಯಿಗಳು ಬೆನ್ನಟ್ಟಿ ದಾಳಿ ಮಾಡಿವೆ. ಜಿಂಕೆ ಪ್ರಾಣ ರಕ್ಷಣೆಗೆಂದು ಸನವಳ್ಳಿ ಗ್ರಾಮದತ್ತ ಓಡಿ ಬಂದಿದ್ದು, ಅಷ್ಟರಲ್ಲಿ ನಾಯಿಗಳು ಜಿಂಕೆಗೆ ಹೊಟ್ಟೆ, ತೊಡೆ, ಮುಖಕ್ಕೆ ಕಚ್ಚಿ ಗಾಯಪಡಿಸಿ ಜಿಂಕೆಯ ಹಿಂದಿನ ಎರಡು ಕಾಲುಗಳನ್ನು ಎಳೆದು ದೇಹದಿಂದ ಬೆರ್ಪಡಿಸಿವೆ.
ಅಷ್ಷರಲ್ಲಿ ಗ್ರಾಮಸ್ಥರು ನಾಯಿಗಳಿಂದ ಜಿಂಕೆಯನ್ನು ರಕ್ಷಣೆ ಮಾಡಿ ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ. ಅರಣ್ಯ ಇಲಾಖೆಯ ಸಿಬ್ಬಂದಿ ಪಶು ಆಸ್ಪತ್ರೆಗೆ ತಂದು ಚಿಕಿತ್ಸೆ ನೀಡಿದ್ದಾರೆ. ಆದರೆ ಎರಡು ಕಾಲುಗಳನ್ನು ಕಳೆದುಕೊಂಡ ಜಿಂಕೆಯನ್ನು ಅರಣ್ಯಕ್ಕೆ ಬಿಟ್ಟರು ಓಡಾಡುವ ಪರಿಸ್ಥಿಯಲ್ಲಿಲ ಆದರಿಂದ ಅರಣ್ಯ ಇಲಾಖೆಯವರೆ ಜಿಂಕೆಯನ್ನು ಉಪಚರಿಸಿ ಸಾಕುವ ಅನಿವಾರ್ಯತೆ ಬಂದೊದಗಿದೆ.