ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೀದಿನಾಯಿಯೊಂದು 70 ಮಂದಿಗೆ ಕಚ್ಚಿ ಸ್ಥಳೀಯರಲ್ಲಿ ನಡುಕ ಹುಟ್ಟಿಸಿದೆ. ಬಿಹಾರದ ಅರಾ ಪಟ್ಟಣದಲ್ಲಿ ನಾಯಿ ದಾಳಿಯಿಂದ ಸರ್ಕಾರಿ ಆಸ್ಪತ್ರೆ ತುಂಬಿ ತುಳುಕುತ್ತಿದೆ. ಭೋಜ್ಪುರ ಪೊಲೀಸ್ ವರಿಷ್ಠಾಧಿಕಾರಿ ಪ್ರಮೋದ್ ಕುಮಾರ್ ನಾಯಿಯ ಅಲೆದಾಟದ ಬಗ್ಗೆ ಎಚ್ಚರವಾಗಿರುವಂತೆ ಮಾಧ್ಯಮಗಳ ಮೂಲಕ ಮನವಿ ಮಾಡಿದರು.
ಶಿವಗಂಜ್, ಶಿಟ್ಲ ತೊಲ, ಮಹಾದೇವ ರಸ್ತೆ, ಸದರ್ ಆಸ್ಪತ್ರೆ ವ್ಯಾಪ್ತಿಯಲ್ಲಿ 70 ಮಂದಿಗೆ ನಾಯಿ ಕಚ್ಚಿದೆ ಎಂದು ತಿಳಿಸಿದರು. ನಾಯಿ ದಾಳಿಯಿಂದ ಗಾಯಗೊಂಡ ಎಲ್ಲರನ್ನೂ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಇಷ್ಟೊಂದು ಮಂದಿಗೆ ಕಚ್ಚಿರುವ ನಾಯಿ ಇದುವರೆಗೂ ಪೊಲೀಸರು ಹಾಗೂ ಪಾಲಿಕೆ ಅಧಿಕಾರಿಗಳ ಕೈಗೆ ಸಿಕ್ಕಿಲ್ಲ. ಅದಕ್ಕಾಗಿ ಗಂಭೀರವಾಗಿ ಶೋಧ ನಡೆಸುತ್ತಿದ್ದೇವೆ ಎಂದು ಪೊಲೀಸರು ಹೇಳಿರುವುದು ಗಮನಾರ್ಹ.
ಹಲವು ಪ್ರದೇಶಗಳಿಗೆ ಸಿಬ್ಬಂದಿಯನ್ನು ಕಳುಹಿಸಲಾಗಿದ್ದು, ಶೀಘ್ರದಲ್ಲೇ ಬೀದಿ ನಾಯಿಯನ್ನು ಹಿಡಿಯಲಾಗುವುದು ಎಂದು ಹೇಳಿದರು. ಇತ್ತೀಚೆಗೆ ಹಲವು ರಾಜ್ಯಗಳಲ್ಲಿ ಬೀದಿನಾಯಿಗಳು ಓಡಾಡುವ ಮತ್ತು ದಾಳಿ ಮಾಡುವ ಘಟನೆಗಳು ವಿಪರೀತವಾಗಿ ಹೆಚ್ಚಿವೆ. ಕೇರಳದ ಹಲವೆಡೆ ನಾಯಿಗಳು ಹಲವರಿಗೆ ಕಚ್ಚಿರುವ ಘಟನೆಗೆ ಸಂಬಂಧಿಸಿದ ವಿಡಿಯೋಗಳು ಇತ್ತೀಚೆಗೆ ವೈರಲ್ ಆಗಿರುವುದು ಗೊತ್ತೇ ಇದೆ.
ಬೀದಿ ನಾಯಿಗಳ ಹಾವಳಿ ಮಿತಿಮೀರಿರುವ ಕುರಿತು ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಕೆಯಾಗಿದೆ ಎಂದರೆ ಪರಿಸ್ಥಿತಿ ಎಷ್ಟು ಗಂಭೀರವಾಗಿದೆ ಎಂಬುದನ್ನು ಅರ್ಥಮಾಡಿಕೊಳ್ಳಬಹುದು. ಬೀದಿನಾಯಿಗಳು ಕಚ್ಚಿದರೆ ಅದಕ್ಕೆ ಆಹಾರ ನೀಡುವವರ ಹೊಣೆ ಎಂದು ಸುಪ್ರೀಂ ಕೋರ್ಟ್ ಕೆಲ ದಿನಗಳ ಹಿಂದೆ ಹೇಳಿತ್ತು.