ಹೊಸದಿಗಂತ ಡಿಜಿಟಲ್ ಡೆಸ್ಕ್:
ಇತ್ತೀಚೆಗೆ ಯುವ ಪೀಳಿಗೆಯಲ್ಲಿ ಹೃದಯಾಘಾತ ಹೆಚ್ಚಾಗಿದೆ. ಮಂಡ್ಯದಲ್ಲಿ ಜನರು ಶಾಕ್ ಆಗುವಂತಹ ಘಟನೆ ನಡೆದಿದ್ದು, ಒಂಬತ್ತನೇ ತರಗತಿಯ ವಿದ್ಯಾರ್ಥಿ ಹೃದಯಾಘಾತಕ್ಕೆ ಬಲಿಯಾಗಿದ್ದಾನೆ.
ಮಂಡ್ಯದ ಮದ್ದೂರಿನ ಸೋಮನಹಳ್ಳಿಯ ಎಸ್ಸಿಎಂಎಂ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ಒಂಬತ್ತನೇ ತರಗತಿ ವಿದ್ಯಾರ್ಥಿ ವೀರಮಣಿ ಹೃದಯಾಘಾತಕ್ಕೆ ಬಲಿಯಾದ ಬಾಲಕ. ಅಜ್ಜಿ ತಾತನ ಮನೆಯಲ್ಲಿದ್ದುಕೊಂಡು ಓದುತ್ತಿದ್ದ ವೀರಮಣಿಗೆ ಯಾವುದೇ ಆರೋಗ್ಯ ಸಮಸ್ಯೆ ಇರಲಿಲ್ಲ.
ಶಾಲೆಯಲ್ಲಿ ವೀರಮಣಿ ಸ್ನೇಹಿತರ ಜತೆ ಊಟ ಮಾಡಿ ನಂತರ ನೀರು ಕುಡಿಯಲು ಹೋಗಿದ್ದಾನೆ. ನೀರು ಕುಡಿಯುವಾಗ ಕುಸಿದು ಬಿದ್ದಿದ್ದಾನೆ. ತಕ್ಷಣವೇ ಶಿಕ್ಷಕರು ವಿದ್ಯಾರ್ಥಿಯನ್ನು ಶಾಲಾ ವಾಹನದಲ್ಲಿ ಮದ್ದೂರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಅಲ್ಲಿನ ವೈದ್ಯರು ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಮಾಹಿತಿ ನೀಡಿದ್ದಾರೆ.
ನಂತರ ಮಿಮ್ಸ್ ಆಸ್ಪತ್ರೆಗೆ ದಾಖಲಿಸಿದಾಗ ಬಾಲಕ ಹೃದಯಾಘಾತದಿಂದ ಮೃತಪಟ್ಟಿದ್ದಾನೆ ಎಂದು ಮಾಹಿತಿ ನೀಡಿದ್ದಾರೆ. ಶಾಲೆಗೆ ಹೋಗಿದ್ದ ಮಗ ಹೆಣವಾಗಿರುವುದನ್ನು ಕಂಡ ಪೋಷಕರು, ಅಜ್ಜ ಅಜ್ಜಿಯ ಆಕ್ರಂದನ ಮುಗಿಲು ಮುಟ್ಟಿತ್ತು.



