ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಿಜಾಬ್ ಪ್ರಕರಣದ ಕುರಿತು ಈಗಾಗಲೇ ಹೈಕೋರ್ಟ್ ಮಧ್ಯಂತರ ಆದೇಶ ನೀಡಿದ್ದರೂ ಕೂಡ ರಾಜ್ಯದ ಹಲವು ಜಿಲ್ಲೆಗಳಲ್ಲಿ ಇಂದು ವಿದ್ಯಾರ್ಥಿನಿಯರು ಹಿಜಾಬ್ ತೆಗೆಯೋಕೆ ವಿರೋಧಿಸಿ, ಕಾಲೇಜು ಆವರಣಗಳಲ್ಲಿ ಪ್ರತಿಭಟಿಸಿದ್ದಾರೆ.
ರಾಜ್ಯದ ಹಲವೆಡೆ ಹಿಜಾಬ್ ವಿವಾದ ನಡೆದಿದ್ದು ಹೀಗೆ…
ತುಮಕೂರು: ನಗರದ ಸರ್ಕಾರಿ ಎಂಪ್ರೆಸ್ ಪದವಿ ಕಾಲೇಜಿನಲ್ಲಿ 40ಕ್ಕೂ ಹೆಚ್ಚು ಮುಸ್ಲಿಂ ಯುವತಿಯರು ಹಿಜಾಬ್ ಧರಿಸಿ ಬಂದು ಕಾಲೇಜು ಆವರಣದಲ್ಲಿ ಹೈಡ್ರಾಮ ನಡೆಸಿದ್ದಾರೆ. ಹಿಜಾಬ್ ಧರಿಸಿದ ವಿದ್ಯಾರ್ಥಿನಿಯರನ್ನು ಪೊಲೀಸರು ತಡೆದಿದ್ದರು. ಇದಕ್ಕೆ ವಿರೋಧಿಸಿದ ಯುವತಿಯರು ತುಮಕೂರಿನ ಟೌನ್ ಹಾಲ್ ಬಳಿ ಇರುವ ಎಂಪ್ರೆಸ್ ಕರ್ನಾಟಕ ಪಬ್ಲಿಕ್ ಸ್ಕೂಲ್ ಮುಂದೆ ʼಅಲ್ಲಾ ಹು ಅಕ್ಬರ್ʼ ಎಂದು ಘೋಷಣೆ ಕೂಗುತ್ತಾ ಪ್ರತಿಭಟನೆ ನಡೆಸಿದರು.
ನೆಲ್ಯಹುದಿಕೇರಿ: ಕರ್ನಾಟಕ ಪಬ್ಲಿಕ್ ಶಾಲೆಯ 38 ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಶಾಲೆಗೆ ಬಂದಿದ್ದರು. ಪೋಷಕರು ಕೂಡ ಶಿಕ್ಷಕರ ಮನವೊಲಿಸಲು ಪ್ರಯತ್ನಿಸಿದರು. ಆದರೆ ನ್ಯಾಯಾಲಯದ ಆದೇಶದ ಮೇರೆಗೆ ಶಿಕ್ಷಣ ಸಂಸ್ಥೆ ಹಿಜಾಬ್ ಧರಿಸುವುದನ್ನು ನಿರಾಕರಿಸಿತು. ಇದರ ಪರಿಣಾಮ ಎಲ್ಲಾ 38 ಶಾಲಾ ವಿದ್ಯಾರ್ಥಿಗಳು ಶಾಲೆಯ ಹೊರಗೆ ಕುಳಿತು ಪ್ರತಿಭಟನೆ ಮಾಡಿದರು.
ಶಿರಸಿ: ಎಂಇಎಸ್ ಪದವಿಪೂರ್ವ ಕಾಲೇಜಿನಲ್ಲಿ ಕೆಲ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಬಂದಿದ್ದರು. ಕಾಲೇಜು ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಪೊಲೀಸರು ಸಮವಸ್ತ್ರ ಸಂಹಿತೆಯ ಬಗ್ಗೆ ತಿಳುವಳಿಕೆ ನೀಡಿ, ಹಿಜಾಬ್ ತೆಗೆದು ಕಾಲೇಜು ತರಗತಿಗೆ ಬರುವಂತೆ ತಿಳಿಸಿದರೂ ಕೇಳದೇ ಹಠ ಹಿಡಿದ ವಿದ್ಯಾರ್ಥಿನಿಯರು, ತರಗತಿ ಬಹಿಷ್ಕರಿಸಿ ಮನೆಗೆ ತೆರಳಿದರು. ಈ ಘಟನೆಯ ಹಿನ್ನೆಲೆಯಲ್ಲಿ ಕಾಲೇಜಿನ ಸುತ್ತಮುತ್ತ ಪೊಲೀಸ್ ಬಂದೋ ಬಸ್ತ್ ಮಾಡಲಾಗಿದೆ.
ಮುಂಡಗೋಡ: ಹಿಜಾಬ್ ಧರಿಸಿ 30ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಪದವಿ ಪೂರ್ವ ಕಾಲೇಜಿಗೆ ಬಂದಿದ್ದರು. ಪ್ರಾಂಶುಪಾಲರ ಸೂಚನೆಗೆ ಒಪ್ಪಿ 20 ವಿದ್ಯಾರ್ಥಿನಿಯರು ಹಿಜಾಬ್ ತೆಗೆದು ತರಗತಿಗೆ ತೆರಳಿದರು. ಉಳಿದ 10 ಮಂದಿ ಮನೆಗೆ ತೆರಳಿ ಪೋಷಕರ ಅನುಮತಿ ಪಡೆಯುತ್ತೇವೆ ಎಂದು ಹಿಂತಿರುಗಿದರು.
ವಿಜಯಪುರ: ನಗರದ ಸರ್ಕಾರಿ ಕಾಲೇಜು ವಿದ್ಯಾರ್ಥಿನಿಯರಿಗೆ ಹಿಜಾಬ್ ತೆಗೆದು ತರಗತಿಗೆ ಬರುವಂತೆ ಸೂಚಿಸಿದ ಹಿನ್ನೆಲೆಯಲ್ಲಿ ಕಾಲೇಜು ಎದುರು ವಿದ್ಯಾರ್ಥಿನಿಯರು ಪ್ರತಿಭಟನೆ ನಡೆಸಿದ್ದಾರೆ. ಪೊಲೀಸರ ಮನವೊಲಿಕೆಯೂ ಜಗ್ಗದ ವಿದ್ಯಾರ್ಥಿನಿಯರು, ಯಾವುದೇ ಕಾರಣಕ್ಕೂ ನಾವು ಹಿಜಾಬ್ ತೆಗೆಯೋದಿಲ್ಲ ಎಂದು ಪ್ರತಿಭಟಿಸಿ ತರಗತಿಗೆ ಹಾಜರಾಗದೆ ಮನೆಗೆ ತೆರಳಿದ್ದಾರೆ.
ಶನಿವಾರಸಂತೆ: ಇಲ್ಲಿನ ಭಾರತಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆರು ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಬಂದಿದ್ದರು. ಮನೆಯಲ್ಲಿ ಹಿಜಾಬ್ ಧರಿಸಲು ಹೇಳಿದ್ದಾರೆ. ಹಿಜಾಬ್ ತೆಗೆಯುವುದಾದರೆ ಕಾಲೇಜಿಗೆ ಹೊಗಬೇಡಿ ಎನ್ನುತ್ತಾರೆ.ಆದ್ದರಿಂದ ತಾವು ಯಾವುದೇ ಕಾರಣಕ್ಕೂ ಹಿಜಾಬ್ ತೆಗೆಯಲ್ಲ ಎಂದು ಪಟ್ಟು ಹಿಡಿದಿದ್ದರು. ಬಳಿಕ ಪ್ರಾಂಶುಪಾಲರ ಸೂಚನೆಗೂ ಒಪ್ಪದ ವಿದ್ಯಾರ್ಥಿನಿಯರು ಮನೆಗೆ ಹಿಂತಿರುಗಿದ್ದಾರೆ.