ಹೊಸದಿಗಂತ ವರದಿ, ಗದಗ:
ಅನಾಥ ಮಕ್ಕಳಿಗೆ ಯಾವ ಪ್ರವರ್ಗ ಇಲ್ಲದೆ ಇರುವದರಿಂದ ಅವರಿಗೆ ನ್ಯಾಯ ದೊರಕಿಸಿಕೊಡಬೇಕಾಗಿದೆ. ಈ ಬಗ್ಗೆ 15 ದಿನಗಳಲ್ಲಿ ಸರಕಾರಕ್ಕೆ ವರದಿ ಸಲ್ಲಿಸಿ, ಹಿಂದುಳಿದ ವರ್ಗಗಳಲ್ಲಿ ಮೀಸಲಾತಿ ನೀಡುವಂತೆ ಮನವಿ ಮಾಡಲಾಗುವುದು ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ ಹೆಗ್ಡೆ ಅವರು ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಅನಾಥ ಮಕ್ಕಳ ಜಾತಿ ತಿಳಿದಿದ್ದರೆ ಅದನ್ನೆ ಮುಂದುವರೆಸಲಾಗುವುದು, ಜಾತಿ ತಿಳಿಯದ ಮಕ್ಕಳಿಗೆ ಭವಿಷ್ಯದಲ್ಲಿ ಅನುಕೂಲವಾಗುವ ನಿಟ್ಟಿನಲ್ಲಿ ಹಿಂದುಳಿದ ವರ್ಗಗಳಲ್ಲಿ ಅವರಿಗೆ ಮೀಸಲಾತಿ ನೀಡುವಂತೆ ಸರಕಾರಕ್ಕೆ ವರದಿ ಸಲ್ಲಿಸಲಾಗುವುದು. ಈ ಬಗ್ಗೆ ತೆಲಂಗಾಣ, ಮಹಾರಾಷ್ಟ್ರ ಹಾಗೂ ತಮಿಳನಾಡು ರಾಜ್ಯಗಳಿಗೆ ಅಯೋಗ ಭೇಟಿ ನೀಡಿ, ವರದಿ ತರಿಸಿಕೊಂಡು ಅಧ್ಯಯನ ಮಾಡಲಾಗಿದೆ ಎಂದು ಹೇಳಿದರು.
ಹಿಂದುಳಿದ ವರ್ಗಗಳ ಸಾಮಾಜಿಕ, ಶೈಕ್ಷಣಿಕ ಸ್ಥಿತಿಗತಿಗಳನ್ನು ತಿಳಿದುಕೊಳ್ಳಲು ಜಿಲ್ಲೆಯ ವಿವಿಧ ಗ್ರಾಮಗಳ ಮನೆ-ಮನೆಗೆ ಭೇಟಿ ನೀಡಿ, ವಿವಿಧ ಸಮಾಜಗಳ ಮನವಿ ಸ್ವೀಕರಿಸಲಾಗಿದ್ದು ಅವುಗಳ ಅಧ್ಯಯನ ನಡೆಸಿ, ಸರಕಾರಕ್ಕೆ ವರದಿ ಸಲ್ಲಿಸಲಾಗುವುದು. ಈಗಾಗಲೆ 17 ವರದಿಗಳನ್ನು ಸಂಗ್ರಹಿಸಲಾಗಿದ್ದು ಇನ್ನೂಳಿದ ಜಿಲ್ಲೆಗಳಲ್ಲಿ ಅಧ್ಯಯನ ನಡೆಸಿ ಸರಕಾರಕ್ಕೆ ವರದಿ ಸಲ್ಲಿಸಲಾಗುವುದು. ಸರಕಾರ ನಮಗೆ ಯಾವುದೇ ಗಡುವು ನೀಡಿಲ್ಲ ಎಂದು ಕೆ.ಜಯಪ್ರಕಾಶ ಹೆಗ್ಡೆ ಅವರು ಹೇಳಿದರು.
ನಂತರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು 2ಎ ಮೀಸಲಾತಿಗಾಗಿ ಹೋರಾಟ ನಡೆಸುತ್ತಿರುವ ವಚನಾನಂದ ಶ್ರೀಗಳು ಹೇಳಿದಂತೆ ಅವರೊಂದಿಗೆ ನಾನು ನಿರಂತರ ಸಂಪರ್ಕದಲ್ಲಿಲ್ಲ ಅವರ ಹೇಳಿಕೆಯನ್ನು ಪತ್ರಿಕೆಗಳಿಂದ ತಿಳಿದುಕೊಂಡಿದ್ದೆನೆ ಮೀಸಲಾತಿ ನೀಡುವದಕ್ಕೆ ಸರಕಾರ ಅಂತಿಮ ತೀರ್ಮಾನ ಕೈಗೊಳ್ಳಲಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಆಯೋಗದ ಸದಸ್ಯರುಗಳಾದ ಕಲ್ಯಾಣಕುಮಾರ ಎಚ್.ಎಸ್., ರಾಜಶೇಖರ ಬಿ.ಎಸ್., ಕೆ.ಟಿ.ಸುವರ್ಣ, ಶಾರದಾ ನಾಯಕ ಅವರು ಉಪಸ್ಥಿತರಿದ್ದರು.