ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಜೆಪಿ ಹಿರಿಯ ಮುಖಂಡ ಸುಬ್ರಮಣಿಯನ್ ಸ್ವಾಮಿ ಅವರು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರನ್ನು ಭೇಟಿ ಮಾಡಿದ್ದಾರೆ.
ಈ ಭೇಟಿ ಬೆನ್ನಲ್ಲೇ ಅವರು ತೃಣಮೂಲ ಕಾಂಗ್ರೆಸ್ ಸೇರುತ್ತಾರೆಂಬ ಊಹಾಪೋಹ ಸಹ ಹರಿದಾಡ್ತಿವೆ.
ಫೋಟೋ ಶೇರ್ ಮಾಡಿರುವ ಸುಬ್ರಮಣಿಯನ್
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿರುವ ಕೆಲವೊಂದು ಫೋಟೋ ಸ್ವಾಮಿ ಅವರೇ ಟ್ವಿಟರ್ನಲ್ಲಿ ಪೋಸ್ಟ್ ಮಾಡಿದ್ದಾರೆ. ನಾನು ಕೋಲ್ಕತ್ತಾದಲ್ಲಿದ್ದೆ. ಮಮತಾ ಬ್ಯಾನರ್ಜಿ ಅವರನ್ನ ಭೇಟಿಯಾಗಿದ್ದೇನೆ. ಅವರು ಧೈರ್ಯಶಾಲಿ. ಸಿಪಿಎಂ ವಿರುದ್ಧದ ಅವರ ಹೋರಾಟ ನಿಜಕ್ಕೂ ಶ್ಲಾಘನೀಯ ಎಂದು ಬರೆದುಕೊಂಡಿದ್ದಾರೆ.
ಬಿಜೆಪಿಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಜೊತೆಗಿನ ಸ್ವಾಮಿ ಸಂಬಂಧ ಸೌಹಾರ್ದಯುತವಾಗಿ ಉಳಿದಿಲ್ಲ. ಹೀಗಾಗಿ, ಕೇಸರಿ ಬ್ರಿಗೇಡ್ ತೊರೆದು ತೃಣಮೂಲ ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆಂಬ ಮಾತು ಕೇಳಿ ಬರಲು ಶುರುವಾಗಿದೆ.
ಸುಬ್ರಮಣಿಯನ್ ಸ್ವಾಮಿ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರ ಭೇಟಿ ಕೇವಲ ಸೌಹಾರ್ದಯುತವಾಗಿ ನಡೆದಿದೆ ಎಂದು ಕೆಲವರು ಹೇಳುತ್ತಿದ್ದಾರೆ. ಬಿಜೆಪಿಯಲ್ಲಿ ಹೆಚ್ಚು ಪ್ರಾಬಲ್ಯ ಹೊಂದಿದ್ದ ಸುಬ್ರಮಣಿಯನ್ ಸ್ವಾಮಿ 2ಜಿ, ನ್ಯಾಷನಲ್ ಹೆರಾಲ್ಡ್, ಅಯೋಧ್ಯೆ ಪ್ರಕರಣ ಹೊರಗೆ ತರುವಲ್ಲಿ ಮಹತ್ತರ ಪಾತ್ರ ನಿರ್ವಹಿಸಿದ್ದರು.