ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಸರಗೋಡು ಜಿಲ್ಲೆಯ ಕಾಞಂಗಾಡ್ ಸಮೀಪದ ಚಿತ್ತಾರಿಯಲ್ಲಿ ಎಲ್ಪಿಜಿ ಸಾಗಾಟದ ಬುಲೆಟ್ ಟ್ಯಾಂಕರ್ನಲ್ಲಿ ಸೋರಿಕೆ ಕಂಡಬಂದು ಕೆಲಕಾಲ ಸ್ಥಳದಲ್ಲಿ ಆತಂಕದ ಸ್ಥಿತಿ ನಿರ್ಮಾಣವಾದ ಘಟನೆ ಗುರುವಾರ ನಡೆದಿದೆ.
ಮಂಗಳೂರಿನಿಂದ ಕೋಜಿಕ್ಕೋಡ್ ಗೆ ತೆರಳುತ್ತಿದ್ದ ಈ ಬುಲೆಟ್ ಟ್ಯಾಂಕರ್ ಚಿತ್ತಾರಿ ಪರಿಸರಕ್ಕೆ ತಲುಪುತ್ತಿದ್ದಂತೆಯೇ ಸೋರಿಕೆ ಕಂಡಬಂದಿದ್ದು, ತಕ್ಷಣವೇ ಚಾಲಕ ಟ್ಯಾಂಕರನ್ನು ರಸ್ತೆ ಪಕ್ಕದಲ್ಲಿ ನಿಲ್ಲಿಸಿ ಕಂಪೆನಿ ಅಧಿಕಾರಿಗಳು ಹಾಗೂ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದರು. ತಕ್ಷಣವೇ ಕಾಞಂಗಾಡ್, ಕಾಸರಗೋಡು ಮೊದಲಾದ ಕಡೆಗಳಿಂದ ಧಾವಿಸಿ ಬಂದ ಅಗ್ನಿಶಾಮಕ ದಳದ ಸಿಬಂದಿಗಳು ಸೋರಿಕೆ ತಡೆಗಟ್ಟಲು ಮುಂದಾಗಿದ್ದು, ಇದೇ ಸಂದರ್ಭ ಮಂಗಳೂರಿನಿಂದ ಗಮಿಸಿದ ಕಂಪನಿಯ ಅಧಿಕಾರಿಗಳ ತಂಡವು ಅವರಿಗೆ ಮಾರ್ಗದರ್ಶನ ನೀಡಿದ್ದಾರೆ.
ಭಾರೀ ಕಾರ್ಯಾಚರಣೆಯ ಬಳಿಕ ಸೋರಿಕೆ ತಡೆಗಟ್ಟಲಾಗಿದ್ದು, ಈ ಟ್ಯಾಂಕರ್ನ ಅನಿಲವನ್ನು ಇತರ ಟ್ಯಾಂಕರ್ಗಳಿಗೆ ವರ್ಗಾಯಿಸುವ ಕಾರ್ಯ ರಾತ್ರಿಯವರೆಗೂ ಮುಂದುವರಿದಿದೆ. ಈಗಾಗಲೇ ಘಟನಾ ಸ್ಥಳದಿಂದ 500 ಸುತ್ತಳತೆ ಮೀಟರ್ ವ್ಯಾಪ್ತಿಯಲ್ಲಿರುವ ಕುಟುಂಬಗಳನ್ನು ಸ್ಥಳಾಂತರಿಸಲಾಗಿದ್ದು, ಈ ರಸ್ತೆಯ ಸಂಚಾರ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.