ಹೊಸ ದಿಗಂತ ವರದಿ , ಗದಗ :
ಸೆ.8 ರಂದು ನಗರದ ತೋಂಟದಾರ್ಯ ಮಠದ ಹತ್ತಿರ ಯುವಕನ ಕೊಲೆಗೆ ಸಂಬಂಧಿಸಿದಂತೆ ಮೃತನ ಸಂಬಂಧಿಕನೋರ್ವನನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜ ಅವರು ಹೇಳಿದರು.
ಅವರು ಶನಿವಾರ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮೃತ ಯುವಕ ಸುದೀಪ ಮುಂಡೆವಾಡಿ ಎಂಬುವನ ಕೊಲೆಗೆ ಸಂಬಂಧಿಸಿದಂತೆ ಸಾಗರ ಮುಂಡೆವಾಡೆ(20) ಎಂಬುವನನ್ನು ಬಂಧಿಸಲಾಗಿದೆ. ಮೃತ ಹಾಗೂ ಆರೋಪಿ ಸಾಗರ್ ಸಂಬಂಧಿಕರಾಗಿದ್ದು ಆರೋಪಿ ಅಟೋ ಚಾಲಕನಾಗಿ ಒಳ್ಳೆಯ ರೀತಿಯಲ್ಲಿ ಹಣ ಸಂಪಾದನೆ ಮಾಡುವದನ್ನು ಸಹಿಸದ ಮೃತ ಸುದೀಪ ಅವನು ಆಗಾಗ ಕೆಟ್ಟುಗಣ್ಣಿನಿಂದ ನೋಡುತ್ತಿದ್ದ ಎನ್ನಲಾಗಿದೆ ಅಲ್ಲದೆ, ಮೃತ ಸುದೀಪನ ಪರಿಚಯಸ್ಥ ಕಾಲೇಜ್ ವಿದ್ಯಾರ್ಥಿನಿಗೆ ಸಾಗರ ಮುಂಡೆವಾಡಿ ತನ್ನ ಅಟೋದಲ್ಲಿ ಡ್ರಾಪ್ ಮಾಡುವ ಸಂದರ್ಭದಲ್ಲಿ ಮೃತ ಸುದೀಪನ ಬಗ್ಗೆ ಇಲ್ಲ ಸಲ್ಲದ ವಿಷಯಗಳನ್ನು ಹೇಳಿ ಅವನ ಬಗ್ಗೆ ಕೆಟ್ಟ ಅಭಿಪ್ರಾಯ ಬರುವಂತೆ ಮಾಡಿದ್ದಾನೆ ಎಂದು ಆಗಾಗ ಪರಸ್ಪರ ಜಗಳ ಮಾಡಿಕೊಂಡು ದ್ವೇಷ ಸಾಧಿಸುತ್ತ ಬಂದಿದ್ದರು ಎನ್ನಲಾಗಿದೆ.
ಅದರಂತೆ ಸೆ. 8ರಂದು ರಾತ್ರಿ ತೋಂಟದಾರ್ಯ ಮಠದ ಹತ್ತಿರ ಸಾಗರ ಮುಂಡೆವಾಡಿ ಹಾಗೂ ಸುದೀಪ ಮುಂಡೆವಾಡಿ ಟೀ ಕುಡಿಯುವ ಸಂದರ್ಭದಲ್ಲಿ ಮಾತಿನ ಚಕಮಕಿ ನಡೆದಿದ್ದು ಸ್ನೇಹಿತರು ಇಬ್ಬರನ್ನು ಬೈದು ಬಿಡಿಸಿ ಕಳುಹಿಸಿದ್ದರೆನ್ನಲಾಗಿದೆ. ಆದರೆ, ಇಷ್ಟಕ್ಕೆ ಸುಮ್ಮನಾಗದ ಆರೋಪಿ ಸಾಗರ ಮತ್ತೆ ಬಂದು ನಿನ್ನನ್ನು ಮುಗಿಸಿಯೇ ಬಿಡುತ್ತೇನೆ ಎಂದು ಆಕ್ರೋಶದಿಂದ ಸುದೀಪನನ್ನು ಬೆನ್ನು ಹತ್ತಿ ಚಾಕುವಿನಿಂದ ಸಂದೀಪನ ಹೊಟ್ಟೆ, ತೊಡೆಗೆ ಚುಚ್ಚಿ ಪರಾರಿಯಾಗಿದ್ದನು.
ಪ್ರಕರಣವನ್ನು ಭೇದಿಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಪ್ರಕರಣವನ್ನು ಬೇಗನೇ ಬೇಧಿಸಿದ ಸಿಬ್ಬಂದಿಗಳಿಗೆ ಎಸ್ಪಿ ಶಿವಪ್ರಕಾಶ ದೇವರಾಜ ಅವರು ಅಭಿನಂಧಿಸಿದ್ದಾರೆ.