April 19, 2026
Sunday, April 19, 2026
spot_img

ಕಬ್ಬು ಕ್ರಾಂತಿ: ರೈತರ ಕಣ್ಣೀರಿಗೆ ನನ್ನ ಜನ್ಮದಿನ ಮೀಸಲು.. ‘ಕಿಚ್ಚು’ ಹರಡುತ್ತೆ ಎಚ್ಚರ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಬ್ಬು ಬೆಳೆಗಾರರಿಗೆ ನ್ಯಾಯಯುತ ಬೆಲೆ ನಿಗದಿ ಮಾಡುವ ವಿಷಯದಲ್ಲಿ ರಾಜ್ಯ ಸರ್ಕಾರ ನಿರ್ಲಕ್ಷ್ಯ ಮುಂದುವರಿಸಿದರೆ, ತಮ್ಮ ಹುಟ್ಟುಹಬ್ಬದ ದಿನವೂ ಹೋರಾಟದಲ್ಲಿ ಭಾಗವಹಿಸುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಘೋಷಿಸಿದ್ದಾರೆ.

ಬೆಳಗಾವಿಯಲ್ಲಿ ನಡೆಯುತ್ತಿರುವ ಕಬ್ಬು ಬೆಳೆಗಾರರ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರೈತರ ಹೋರಾಟಕ್ಕೆ ತಮ್ಮ ಸಂಪೂರ್ಣ ಬೆಂಬಲ ಇದೆ ಎಂದು ಸ್ಪಷ್ಟಪಡಿಸಿದರು.

ರಾಜ್ಯ ಸರ್ಕಾರಕ್ಕೆ ವಿಜಯೇಂದ್ರ ಆಗ್ರಹ:

ಸಮಸ್ಯೆ ಇಂದೇ ಬಗೆಹರಿಯಲಿ: ಇಂದು ಸಂಜೆಯೊಳಗೆ ರಾಜ್ಯ ಸರ್ಕಾರವು ಸ್ಥಳಕ್ಕೆ ಉಸ್ತುವಾರಿ ಸಚಿವರನ್ನಾಗಲಿ, ಸಕ್ಕರೆ ಸಚಿವರನ್ನಾಗಲಿ ಅಥವಾ ಮುಖ್ಯಮಂತ್ರಿಗಳೇ ಖುದ್ದಾಗಿ ಆಗಮಿಸಿ ಕಬ್ಬು ಬೆಳೆಗಾರರ ಬೇಡಿಕೆಯಂತೆ ನ್ಯಾಯಯುತ ದರವನ್ನು ನಿಗದಿ ಮಾಡಬೇಕು ಎಂದು ವಿಜಯೇಂದ್ರ ಆಗ್ರಹಿಸಿದರು.

ನಾಳೆ ಹೋರಾಟ ಮುಂದುವರಿಕೆ: “ನಾಳೆ ನನ್ನ ಜನ್ಮದಿನವಿದ್ದರೂ, ಕಣ್ಣೀರು ಸುರಿಸುತ್ತಿರುವ ರೈತರಿಗಾಗಿ ನಾಳಿನ ದಿನವನ್ನು ಮೀಸಲಿಡುತ್ತೇನೆ. ನಾನೂ ಸಹ ರೈತರ ಜೊತೆಯಾಗಿ ಹೋರಾಟದಲ್ಲಿ ಧುಮುಕುತ್ತೇನೆ,” ಎಂದು ಅವರು ಸವಾಲು ಹಾಕಿದರು.

ರಾಜ್ಯಾದ್ಯಂತ ಕಿಚ್ಚು: ಒಂದು ವೇಳೆ ನಾಳೆಯೊಳಗೆ ಈ ಸಮಸ್ಯೆಯನ್ನು ಸರ್ಕಾರ ಬಗೆಹರಿಸದಿದ್ದರೆ, ಕಬ್ಬು ಬೆಳೆಗಾರರ ಈ ಹೋರಾಟದ ಕಿಡಿಯು ರಾಜ್ಯಾದ್ಯಂತ ವ್ಯಾಪಿಸಿ ಉಗ್ರ ಸ್ವರೂಪ ಪಡೆಯುತ್ತದೆ ಎಂದು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಬಿಜೆಪಿ ರಾಜ್ಯಾಧ್ಯಕ್ಷರ ಈ ಹೇಳಿಕೆಯು ಕಬ್ಬು ಬೆಳೆಗಾರರ ಹೋರಾಟಕ್ಕೆ ಹೊಸ ತಿರುವು ನೀಡಿದ್ದು, ರಾಜ್ಯ ಸರ್ಕಾರದ ಮುಂದಿನ ನಡೆಯ ಮೇಲೆ ಎಲ್ಲರ ಚಿತ್ತ ನೆಟ್ಟಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !