ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಹಿಂದು ಕಾರ್ಯಕರ್ತ ಸುಹಾಸ್ ಹತ್ಯೆ ಖಂಡಿಸಿ ಪುತ್ತೂರಿನಲ್ಲಿ ವ್ಯಾಪ ಆಕ್ರೋಶ ವ್ಯಕ್ತವಾಗಿದೆ.
ಪುತ್ತೂರು ಬಸ್ ನಿಲ್ದಾಣ ಬಳಿ ಸೇರಿದ ಹಿಂದು ಮುಖಂಡರು, ಕಾರ್ಯಕರ್ತರು ಘಟನೆಯನ್ನು ತೀವ್ರವಾಗಿ ಖಂಡಿಸಿದರು.
ಈ ಸಂದರ್ಭ ಹಿಂದೂ ಸಂಘಟನೆಯ ಮುಖಂಡ ಮುರಳೀಕೃಷ್ಣ ಹಸಂತ್ತಡ್ಕ ಮಾತನಾಡಿ, ಬಂದ್ ನಡೆಸದಿದ್ದರೆ ನಾವು ಇಲ್ಲೇ ಕುಳಿತುಕೊಂಡು ಪ್ರತಿಭಟಿಸಲು ಸಿದ್ಧ ಎಂದರು. ಅರುಣ್ ಕುಮಾರ್ ಪುತ್ತಿಲ ಅವರು ಪೊಲೀಸರ ಜೊತೆ ಮಾತನಾಡಿ, ಅಂಗಡಿಗಳನ್ನು ಬಂದ್ ಮಾಡಿಸಿ. ಹಾಗೊಂದು ವೇಳೆ ಬಂದ್ ಮಾಡದೇ ಇದ್ದರೆ ಸವಾಲು ಎದುರಿಸಲು ಸಿದ್ದರಾಗಿ ಎಂದರು.
ಬಳಿಕ ಬಸ್ ನಿಲ್ದಾಣ ಕಟ್ಟಡದ ಒಂದೊಂದು ಅಂಗಡಿಗಳು ಬಂದ್ ಮಾಡಲು ಶುರು ಮಾಡಿದವು. ಅಲ್ಲಿವರೆಗೂ ಹಿಂದೂ ಕಾರ್ಯಕರ್ತರು, ಮುಖಂಡರು ಸ್ಥಳದಲ್ಲೇ ಜಮಾಯಿಸಿದ್ದರು. ಪುತ್ತೂರು ತಾಲೂಕಿನ ಬಹುತೇಕ ಪ್ರದೇಶಗಳಲ್ಲಿ ಅಂಗಡಿ ಮುಂಗಟುಗಳು ಮುಚ್ಚಿ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದವು. ಪೊಲೀಸರು ಬಂದೋಬಸ್ತ್ ನಡೆಸಿದರು.
ವಿಟ್ಲದಲ್ಲಿಯೂ ಬಂದ್ ಯಶಸ್ವಿ
ಸುಹಾಸ್ ಶೆಟ್ಟಿ ಹತ್ಯೆಯನ್ನು ಖಂಡಿಸಿ, ಹಿಂದು ಸಂಘಟನೆಗಳು ನೀಡಿದ ಬಂದ್ ಕರೆಗೆ ವಿಟ್ಲದಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗಿದೆ.
ಬೆಳಿಗ್ಗೆ ಕೇರಳ ರಾಜ್ಯದ ಮತ್ತು ಕರ್ನಾಟಕದ ಕೆಎಸ್ ಆರ್ ಟಿ ಸಿ ಬಸ್ ಗಳ ಸಂಚಾರ ಮಾಡಿತ್ತು. ಬಳಿಕ ಸಂಚಾರ ಸಂಚಾರ ಸ್ಥಗಿತಗೊಳಿಸಿದೆ. ಇನ್ನೂ ಖಾಸಗಿ ಬಸ್ ಗಳು ಬೆಳಿಗ್ಗೆನಿಂದಲೇ ರಸ್ತೆಗೆ ಇಳಿಯಲಿಲ್ಲ. ತುರ್ತು ಸೇವೆಗಳಾದ ಆಸ್ಪತ್ರೆ, ಮೆಡಿಕಲ್, ಹಾಲಿನ ಅಂಗಡಿ ಹೊರತುಪಡಿಸಿ ಉಳಿದೆಲ್ಲ ಅಂಗಡಿ ಮುಗ್ಗಟ್ಟು ಬಂದ್ ಆಗಿದೆ. ವಿಟ್ಲ ಪೊಲೀಸರು ಅಲ್ಲಲ್ಲಿ ನಾಕಾಬಂಧಿ ಅಳವಡಿಸಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮ ಕೈಗೊಂಡಿದ್ದಾರೆ.