ಹೊಸದಿಗಂತ ಡಿಜಿಟಲ್ ಡೆಸ್ಕ್:
ಸೂಪರ್ಸ್ಟಾರ್ ರಜನೀಕಾಂತ್ ‘ಕೂಲಿ’ ಸಿನಿಮಾದ ಶೂಟಿಂಗ್ ಮುನ್ನ ಅಧ್ಯಾತ್ಮದ ಅನುಭವ ಪಡೆಯಲು ಅವರು ಕೆಲವು ಸ್ಥಳಗಳಿಗೆ ತೆರಳಲಿದ್ದಾರೆ. ಈಗಾಗಲೇ ಕೇದರನಾಥಕ್ಕೆ ಹೋಗಿರುವ ಅವರು ಹಿಮಾಲಯಕ್ಕೂ ಭೇಟಿ ನೀಡಲಿದ್ದಾರೆ.
ಅಲ್ಲಿನ ಗುಹೆಗಳಲ್ಲಿ ಅಧ್ಯಾತ್ಮದ ಹೊಸ ಅನುಭವ ಪಡೆಯಲಿದ್ದಾರೆ. ಅಲ್ಲಿಂದ ವಾಪಸ್ ಬಂದ ನಂತರ ‘ಕೂಲಿ’ ಸಿನಿಮಾದ ಚಿತ್ರೀಕರಣದಲ್ಲಿ ಭಾಗಿ ಆಗಲಿದ್ದಾರೆ ಎನ್ನಲಾಗಿದೆ.
ಈ ಬಾರಿಯ ತಮ್ಮ ಅಧ್ಯಾತ್ಮದ ಪಯಣವನ್ನು ಆರಂಭಿಸಲು ರಜನಿಕಾಂತ್ ಅವರು ಗುರುವಾರ (ಮೇ 30) ಮುಂಜಾನೆಯೇ ಚೆನ್ನೈನಿಂದ ಡೆಹರಾಡೂನ್ ತಲುಪಿದ್ದಾರೆ. ಡೆಹರಾಡೂನ್ ವಿಮಾನ ನಿಲ್ದಾಣದಲ್ಲಿ ಅವರು ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ. ‘ಪ್ರತಿ ವರ್ಷ ನಾನು ಹೊಸ ಅನುಭವ ಪಡೆಯುತ್ತೇನೆ. ಅದರಿಂದ ನನ್ನ ಅಧ್ಯಾತ್ಮದ ಪಯಣ ಮುಂದುವರಿಯುತ್ತದೆ. ಈ ಬಾರಿ ಕೂಡ ನನಗೆ ಹೊಸ ಅನುಭವ ಆಗಲಿದೆ ಅಂತ ನಾನು ನಂಬಿದ್ದೇನೆ’ ಎಂದು ರಜನಿಕಾಂತ್ ಹೇಳಿದ್ದಾರೆ.
ಇಡೀ ಜಗತ್ತಿಗೆ ಅಧ್ಯಾತ್ಮ ಬೇಕು. ಪ್ರತಿಯೊಬ್ಬ ಮನುಷ್ಯರಿಗೂ ಅದು ಮುಖ್ಯ. ಆಧ್ಯಾತ್ಮಿಕವಾಗಿ ಇರುವುದು ಎಂದರೆ ಶಾಂತಿ, ನೆಮ್ಮದಿಯಿಂದ ಇರುವುದು ಮತ್ತು ದೇವರಲ್ಲಿ ನಂಬಿಕೆ ಇಡುವುದು’ ಎಂದಿದ್ದಾರೆ ರಜನಿಕಾಂತ್. ಬದ್ರಿನಾಥ್, ಕೇದಾರನಾಥ್ ಮುಂತಾದ ಸ್ಥಳಗಳಿಗೆ ತೆರಳುವುದಾಗಿ ಅವರು ಮಾಹಿತಿ ನೀಡಿದ್ದಾರೆ.