ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಭಾಧ್ಯಕ್ಷರೊಂದಿಗೆ ಅನುಚಿತವಾಗಿ ವರ್ತಿಸಿದ ಆರೋಪದ ಮೇಲೆ ಮಹಾರಾಷ್ಟ್ರ ರಾಜ್ಯ ವಿಧಾನಸಭೆಯಿಂದ 12 ಬಿಜೆಪಿ ಶಾಸಕರನ್ನು ಒಂದು ವರ್ಷ ಅಮಾನತುಗೊಳಿಸಲಾಗಿತ್ತು. ಒಂದು ವರ್ಷದ ತಮ್ಮ ಅಮಾನತನ್ನು ಪ್ರಶ್ನಿಸಿ ಶಾಸಕರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಇದೀಗ 12 ಬಿಜೆಪಿ ಶಾಸಕರ ಒಂದು ವರ್ಷದ ಅಮಾನತನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ.
ಒಂದು ವರ್ಷ ಅಮಾನತುಗೊಳಿಸಿರುವುದು ಅಸಾಂವಿಧಾನಿಕ ಎಂದು ಸುಪ್ರೀಂ ಹೇಳಿದೆ. 12 ಶಾಸಕರು ಸ್ವೀಕರ್ ಚೇಂಬರ್ನಲ್ಲಿ ಸಭಾಧ್ಯಕ್ಷ ಭಾಸ್ಕರ್ ಜಾಧವ್ ಅವರೊಂದಿಗೆ ಅನುಚಿತವಾಗಿ ವರ್ತಿಸಿದ್ದರು ಎಂದು ರಾಜ್ಯ ಸರ್ಕಾರ ಆರೋಪಿಸಿತ್ತು. ಸಂಜಯ್ ಕುಟೆ, ಆಶೀಶ್ ಶೇಲರ್, ಅಭಿಮನ್ಯು ಪವಾರ್, ಗಿರಿಶ್ ಮಹಾಜನ್, ಅತುಲ್ ಭಟ್ಕಲ್ಕರ್, ಪರಾಗ್ ಅಲ್ವಾನಿ, ಹರೀಶ್ ಪಿಂಪಲೆ, ಯೋಗೇಶ್ ಸಾಗರ್, ಜಯ್ ಕುಮಾರ್ ರಾವತ್, ನಾರಾಯಣ್ ಕುಚೆ, ರಾಮ್ ಸತ್ಪುತೆ ಹಾಗೂ ಬಂಟಿ ಭಾಂಗ್ಡಿಯಾ ಅಮಾನತಾಗಿದ್ದ ಶಾಸಕರು.
ಈ ಬಗ್ಗೆ ಬಿಜೆಪಿ ನಾಯಕ ದೇವೇಂದ್ರ ಫಡ್ನಾವಿಸ್ ಮಾತನಾಡಿದ್ದು, ಸುಪ್ರೀಂ ನಿರ್ಣಯ ಸ್ವಾಗತಾರ್ಹ. ಮಳೆಗಾಲದ ಅಧಿವೇಶನದಲ್ಲಿ ಒಬಿಸಿಗಳಿಗಾಗಿ ಹೋರಾಡುತ್ತಿದ್ದ ನಮ್ಮ 12 ಬಿಜೆಪಿ ಶಾಸಕರು ಅಮಾನತು ರದ್ದುಗೊಳಿಸಿದ ಐತಿಹಾಸಿಕ ನಿರ್ಧಾರಕ್ಕೆ ಸುಪ್ರೀಂ ಕೋರ್ಟ್ಗೆ ಧನ್ಯವಾದಗಳು ಎಂದಿದ್ದಾರೆ.