ಹೊಸದಿಗಂತ ಡಿಜಿಟಲ್ ಡೆಸ್ಕ್:
ವಾರಣಾಸಿ ಗ್ಯಾನವಾಪಿ ಮಸೀದಿ ನೆಲಮಹಡಿಯಲ್ಲಿ ಹಿಂದುಗಳ ಪೂಜೆ ನಿಲ್ಲಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.ಇದರಿಂದ ಹಿಂದುಗಳ ಪೂಜೆಗೆ ಅವಕಾಶ ನೀಡಿರುವ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದ ಸಮಿತಿಗೆ ಹಿನ್ನಡೆಯಾಗಿದೆ.
ಮಸೀದಿಯ ನೆಲಮಹಡಿಯಲ್ಲಿರುವ ವ್ಯಾಸ್ ಠಿಖಾನಾ ಎಂದೂ ಕರೆಯಲಾಗುವ ಜ್ಞಾನವಾಪಿ ಮಸೀದಿಯ ದಕ್ಷಿಣದ ಭಾಗದ ನೆಲಮಹಡಿಯಲ್ಲಿನ ಮೂರ್ತಿಗಳಿಗೆ ಪೂಜೆ ಮಾಡಲು ಅವಕಾಶಕ್ಕೆ ತಡೆ ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಈ ಮೂಲಕ ಮಸೀದಿ ಸಮಿತಿಯ ಅರ್ಜಿಯನ್ನು ವಜಾಗೊಳಿಸಿದೆ.
ಗ್ಯಾನವಾಪಿ ಮಸೀದಿ ಉಸ್ತುವಾರಿ ವಹಿಸಿರುವ ಅಂಜುಮನ್ ಇಂತೇಝಾಮಿಯಾ ಮಸೀದಿ ಸಮಿತಿ ಅಲಹಾಬಾದ್ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಇಂದು ಸುಪ್ರೀಂ ಕೋರ್ಟ್ ಮುಖ್ಯನ್ಯಾಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಪೀಠ ಈ ಅರ್ಜಿ ಕುರಿತು ವಿಚಾರಣೆ ನಡೆಸಿ ಆದೇಶ ನೀಡಿದೆ. ಅಲಹಾಬಾದ್ ಹೈಕೋರ್ಟ್ ಆದೇಶ ಎತ್ತಿ ಹಿಡಿದ ಸುಪ್ರೀಂ ಕೋರ್ಟ್, ಹಿಂದುಗಳ ಪೂಜೆಗೆ ತಡೆ ನೀಡಲು ನಿರಾಕರಿಸಿದೆ. ಇದೇ ವೇಳೆ ಮಸೀದಿ ಆವರಣದೊಳಗೆ ಹಿಂದುಗಳ ಧಾರ್ಮಿಕ ಆಚರಣೆಗಳ ಮೇಲೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸೂಚಿಸಿದೆ.
ಮಸೀದಿಯ ನೆಲಮಹಡಿಯಲ್ಲಿರುವ ಹಿಂದು ಮೂರ್ತಿಗಳ ಪೂಜೆಗೆ ಅವಕಾಶ ನೀಡುವಂತೆ ವಾರಣಾಸಿ ಕೋರ್ಟ್ನಲ್ಲಿ ಸುದೀರ್ಘ ವಿಚಾರಣೆ ನಡೆದಿತ್ತು. ಈ ಹೋರಾಟದಲ್ಲಿ ಜನವರಿ 31ರಂದು ಮಹತ್ವದ ಗೆಲುವು ಸಿಕ್ಕಿತ್ತು. ವಾರಣಾಸಿ ಜಿಲ್ಲಾ ನ್ಯಾಯಾಲಯ ಜನವರಿ 31ಕ್ಕೆ ಹಿಂದುಗಳಿಗೆ ಪೂಜೆಗೆ ಅವಕಾಶಕ್ಕೆ ಕೋರ್ಟ್ ಸಮ್ಮತಿಸಿತ್ತು. ಇಷ್ಟೇ ಅಲ್ಲ ಒಂದು ವಾರದೊಳಗೆ ಪೂಜೆಗೆ ಅವಕಾಶ ನೀಡಬೇಕು ಎಂದು ಆದೇಶ ನೀಡಿತ್ತು. ಇದರಂತೆ ಜನವರಿ 31ರ ತಡರಾತ್ರಿಯೇ ಪೂಜೆಗೆ ಜಿಲ್ಲಾಡಳಿತ ಎಲ್ಲಾ ವ್ಯವಸ್ಥೆ ಮಾಡಿತ್ತು.
ವಾರಾಣಾಸಿ ಜಿಲ್ಲಾ ನ್ಯಾಯಾಲಯದ ಆದೇಶವನ್ನು ಅಲಹಾಬಾದ್ ಹೈಕೋರ್ಟ್ನಲ್ಲಿ ಮುಸ್ಲಿಮ್ ಸಮಿತಿ ಪ್ರಶ್ನಿಸಿತ್ತು. ಹೈಕೋರ್ಟ್ ಕೂಡ ಈ ಆದೇಶಕ್ಕೆ ತಡೆ ನೀಡಲು ನಿರಾಕರಿಸಿತ್ತು. ಹೀಗಾಗಿ ಸುಪ್ರೀಂ ಕೋರ್ಟ್ಗೆ ಮನವಿ ಸಲ್ಲಿಸಲಾಗಿತ್ತು. ಇದೀಗ ಸುಪ್ರೀಂ ಕೋರ್ಟ್ ಕೂಟ ಹಿಂದುಗಳ ಪೂಜೆಗೆ ಅಸ್ತು ಎಂದಿದೆ.