ಹೊಸದಿಗಂತ ಡಿಜಿಟಲ್ ಡೆಸ್ಕ್:
ಯೋಗ ಗುರು ಬಾಬಾ ರಾಮ್ದೇವ್ ಮಾಲೀಕತ್ವದ ಪತಂಜಲಿ ಆರ್ಯುವೇದ ಕಂಪನಿಯ ಸುಳ್ಳು ಜಾಹೀರಾತಿನ ಬಗ್ಗೆ ಕೇಂದ್ರ ಸರ್ಕಾರ ಯಾವುದೇ ಕ್ರಮ ಕೈಗೊಳ್ಳದೇ ಇರುವ ಬಗ್ಗೆ ಸುಪ್ರೀಂ ಕೋರ್ಟ್ ಮಂಗಳವಾರ ಅಸಮಾಧಾನ ವ್ಯಕ್ತಪಡಿಸಿದೆ.
ಪತಂಜಲಿ ಕಂಪನಿಯ ಜಾಹೀರಾತುಗಳಿಂದ ಇಡೀ ದೇಶವನ್ನೇ ಅವರು ದಾರಿ ತಪ್ಪಿಸುತ್ತಿದ್ದಾರೆ . ಇದು ನಿಜಕ್ಕೂ ದುರಾದೃಷ್ಟದ ಸಂಗತಿ. ಕೇಂದ್ರ ಸರ್ಕಾರ ಈ ಕುರಿತಾಗಿ ತುರ್ತಾಗಿ ಕ್ರಮ ಕೈಗೊಳ್ಳಬೇಕಿದೆ ಎಂದು ಸುಪ್ರೀಂ ಕೋರ್ಟ್ ಪೀಠ ಹೇಳಿದೆ.
ಈ ರೀತಿ ತಪ್ಪುದಾರಿಗೆಳೆಯುವ ಮಾಹಿತಿ ನೀಡುವ ಔಷಧಗಳ ಎಲ್ಲಾ ಎಲೆಕ್ಟ್ರಾನಿಕ್ ಮತ್ತು ಮುದ್ರಣ ಜಾಹೀರಾತುಗಳನ್ನು ತಕ್ಷಣವೇ ಜಾರಿಗೆ ಬರುವಂತೆ ನಿಲ್ಲಿಸುವಂತೆ ಪೀಠವು ಕಂಪನಿಗೆ ನಿರ್ದೇಶನ ನೀಡಿದೆ.
ಕಳೆದ ವರ್ಷ ನವೆಂಬರ್ನಲ್ಲಿ ಸುಪ್ರೀಂ ಕೋರ್ಟ್ ಪತಂಜಲಿ ಆಯುರ್ವೇದ ತನ್ನ ಔಷಧಿಗಳ ಬಗ್ಗೆ ಜಾಹೀರಾತುಗಳಲ್ಲಿ ಸುಳ್ಳು ಮತ್ತು ದಾರಿ ತಪ್ಪಿಸುವ ಮಾಹಿತಿಗಳನ್ನು ನೀಡುವುದರ ವಿರುದ್ಧ ಎಚ್ಚರಿಕೆ ನೀಡಿತ್ತು.
ಈ ಗುರು ಸ್ವಾಮಿ ರಾಮದೇವ್ ಬಾಬಾಗೆ ಏನಾಯಿತು? ಯೋಗವನ್ನು ಜನಪ್ರಿಯಗೊಳಿಸಿದ್ದರಿಂದ ನಾವು ಅವರನ್ನು ಗೌರವಿಸುತ್ತೇವೆ. ಆದರೆ, ಅವರು ಇತರ ವ್ಯವಸ್ಥೆಯನ್ನು ಟೀಕಿಸಬಾರದು. ಎಲ್ಲಾ ವೈದ್ಯರ ಮೇಲೆ ಆರೋಪ ಮಾಡುವ ರೀತಿಯ ಜಾಹೀರಾತುಗಳನ್ನು ನೀವು ನೋಡುತ್ತೀರಿ ಎಂದು ಹಿಂದಿನ ಸಿಜೆಐ ಎನ್.ವಿ.ರಮಣ ನೇತೃತ್ವದ ಪೀಠ ಹೇಳಿತ್ತು.ತಪ್ಪು ದಾರಿಗೆಳೆಯುವ ವೈದ್ಯಕೀಯ ಜಾಹೀರಾತುಗಳ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಂತೆ ಕೇಂದ್ರದ ಪರ ಹಾಜರಾದ ವಕೀಲರಿಗೆ ಸುಪ್ರೀಂ ಕೋರ್ಟ್ ಕೇಳಿತ್ತು.
ಭಾರತೀಯ ವೈದ್ಯಕೀಯ ಸಂಘ (ಐಎಂಎ) ಅಲೋಪತಿ ಮತ್ತು ವೈದ್ಯರನ್ನು ಕಳಪೆ ಎನ್ನುವ ರೀತಿಯಲ್ಲಿ ಬಿಂಬಿಸುವ ಹಲವಾರು ಜಾಹೀರಾತುಗಳನ್ನು ಉಲ್ಲೇಖ ಮಾಡಲಾಗಿದೆ. ಆಯುರ್ವೇದ ಔಷಧಿಗಳ ಉತ್ಪಾದನೆಯಲ್ಲಿ ತೊಡಗಿರುವ ಸಂಸ್ಥೆಗಳು ಸಾರ್ವಜನಿಕರನ್ನು ದಾರಿತಪ್ಪಿಸಲು ಇಂಥ ತಪ್ಪು ದಾರಿಗೆಳೆಯುವ ಮಾಹಿತಿ ನೀಡಿವೆ ಎಂದು ಹೇಳಿದೆ. .
ಡ್ರಗ್ಸ್ ಮತ್ತು ಮ್ಯಾಜಿಕ್ ರೆಮಿಡೀಸ್ (ಆಕ್ಷೇಪಾರ್ಹ ಜಾಹೀರಾತುಗಳು) ಕಾಯಿದೆ 1954 ರಲ್ಲಿ ನಿರ್ದಿಷ್ಟಪಡಿಸಿದ ರೋಗಗಳು/ಅಸ್ವಸ್ಥತೆಗಳಿಗೆ ಸಂಬಂಧಿಸಿದ ತನ್ನ ಉತ್ಪನ್ನಗಳನ್ನು ಜಾಹೀರಾತು ನೀಡದಂತೆ ನ್ಯಾಯಾಲಯವು ಪತಂಜಲಿ ಆಯುರ್ವೇದವನ್ನುಈ ಕ್ಷಣದಿಂದಲೇ ನಿರ್ಬಂಧಿಸಿದೆ. ಅದರೊಂದಿಗೆ ತಪ್ಪು ದಾರಿಗೆಳೆಯುವ ಜಾಹೀರಾತುಗಳನ್ನು ಪ್ರಕಟ ಮಾಡಿದ್ದಕ್ಕಾಗಿ ಪತಂಜಲಿ ಆಯುರ್ವೇದ ಮತ್ತು ಕಂಪನಿಯ ಎಂಡಿ ಆಚಾರ್ಯ ಬಾಲಕೃಷ್ಣ ಅವರಿಗೆ ಸುಪ್ರೀಂ ಕೋರ್ಟ್ ನ್ಯಾಯಾಂಗ ನಿಂದನೆ ನೋಟಿಸ್ಅನ್ನೂ ಕಳಿಸುವಂತೆ ತಿಳಿಸಿದೆ.