ಹೊಸದಿಗಂತ ಡಿಜಿಟಲ್ ಡೆಸ್ಕ್
ರಾಮಸೇತು ಎಂಬ ಸಿನಿಮಾವೊಂದು ಬಂದಿದೆ. ಈ ಬರಹ ಅದರ ವಿಮರ್ಶೆ ಅಲ್ಲ. ಆದರೆ ಇದೇ ಸಂದರ್ಭ ನೆಪವಾಗಿಟ್ಟುಕೊಂಡು, ರಾಮಸೇತು ಕುರಿತ ಕೆಲವು ಆಸಕ್ತಿಕರ ಅಂಶಗಳನ್ನು ಮೆಲುಕು ಹಾಕೋಣ.
-ಮೊದಲಿಗೆ ರಾಮಸೇತು ಅನ್ನೋದು ಭಾರತೀಯರ ಮನೋಭೂಮಿಕೆಯಲ್ಲಿ ಮಾತ್ರ ಗಟ್ಟಿಯಾಗಿತ್ತು. ಆದರೆ ಯಾವಾಗ ನಾಸಾದ ಉಪಗ್ರಹಗಳು ಕೆಲಸ ಮಾಡ್ಲಿಕ್ಕೆ ಶುರುಮಾಡಿದವೋ ಆಗ ಅವು ತೆಗೆದ ಚಿತ್ರದಲ್ಲಿ ಭಾರತ ಮತ್ತು ಶ್ರೀಲಂಕಾಗಳ ನಡುವೆ ನಿಜಕ್ಕೂ ಅವಿಚ್ಛಿನ್ನವಾಗಿ ಸೇತುವೆಯ ಮಾದರಿಯೊಂದು ಇರೋದು ಖಾತ್ರಿಯಾಯ್ತು.
-ಆದರೆ ಈ ಸೇತುವೆಯಂಥ ಮಾದರಿ ನಿಜಕ್ಕೂ ಮಾನವನಿರ್ಮಿತವೇ ಎಂಬ ಬಗ್ಗೆ ಯಾವ ಆಧಾರಗಳೂ ಮುಂದೆ ಬಂದಿರಲಿಲ್ಲ.
-ಇಂತಿಪ್ಪ ರಾಮಸೇತು ವಿವಾದಕ್ಕೆ ಒಳಗಾಗಿದ್ದು 2004ರಲ್ಲಿ ಅವತ್ತಿನ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಇದೇ ವಾದವನ್ನು ಮುಂದಿಟ್ಟುಕೊಂಡು ರಾಮಸೇತುವನ್ನು ಒಡೆದು ಅಲ್ಲಿ ಹಡಗುಗಳು ಸರಾಗವಾಗಿ ಚಲಿಸುವುದಕ್ಕೆ ಅನುಕೂಲವಾಗುವಂತೆ ಸೇತುಸಮುದ್ರಂ ಯೋಜನೆ ತರೋದಕ್ಕೆ ಹೊರಟಾಗ. ರಾಮನಿಗೆ ಐತಿಹಾಸಿಕ ಆಧಾರವಿಲ್ಲವಾದ್ದರಿಂದ ರಾಮಸೇತು ಮಾನವ ನಿರ್ಮಿತ ಅಂತ ಹೇಳಲಾಗದು, ಇದನ್ನು ನಿವಾರಿಸಿ ಹಡಗುಮಾರ್ಗ ಮಾಡುವುದರಿಂದ ಯಾವುದೇ ಅಡ್ಡಿಯಾಗದು ಎಂದು ನ್ಯಾಯಾಲಯಕ್ಕೆ ಅಂದಿನ ಸರ್ಕಾರ ಸಲ್ಲಿಸಿದ್ದ ಅಫಡವಿಟ್ ಶ್ರದ್ಧಾಳುಗಳನ್ನು ಕೆರಳಿಸಿತ್ತು. ನಂತರದ ದಿನಗಳಲ್ಲಿ ಸರ್ಕಾರ ಆ ಯೋಜನೆಯಿಂದ ಹಿಂದೆ ಸರಿಯಿತು.
-2017ರಲ್ಲಿ ಡಿಸ್ಕವರಿ ಒಡೆತನದ ದ ಸೈನ್ಸ್ ಚಾನೆಲ್, ರಾಮಸೇತುವಿನ ಬಗ್ಗೆ ವೈಜ್ಞಾನಿಕ ಸಾಕ್ಷ್ಯಚಿತ್ರವೊಂದನ್ನು ಪ್ರಸ್ತುತಪಡಿಸಿತು. ಅದರಲ್ಲಿ ಭೂಗರ್ಭಶಾಸ್ತ್ರಜ್ಞರು ಭಾರತ ಮತ್ತು ಶ್ರೀಲಂಕಾ ನಡುವಿನ ರಾಮಸೇತು, ಇಂಗ್ಲಿಷರ ಬಾಯಲ್ಲಿ ಆ್ಯಡಂ ಬ್ರಿಡ್ಜ್ ಅಂತ ಕರೆಸಿಕೊಳ್ಳೋ ಪ್ರದೇಶದ ಮರಳು ಮತ್ತು ಕಲ್ಲುಗಳನ್ನು ಅವುಗಳ ದಿನಾಂಕ ಅರಿಯಬಲ್ಲಂಥ ವೈಜ್ಞಾನಿಕ ಪರೀಕ್ಷೆಗೆ ಒಳಪಡಿಸಲಾಯಿತು. ಈ ಪರೀಕ್ಷೆಯ ನಂತರ ಈ ಭೂವಿಜ್ಞಾನಿಗಳು ಪ್ರತಿಪಾದಿಸಿದ ಸಂಗತಿ ಏನೆಂದರೆ- ಧನುಷ್ಕೋಡಿಯಿಂದ ಶ್ರೀಲಂಕಾದ ನೆತ್ತಿವರೆಗೆ ಹರಡಿಕೊಂಡಿರೋ ಮರಳಿನ ಮೇಲೆ ಕಲ್ಲುಗಳಿವೆ. ಆದ್ರೆ ಈ ಮರಳಿನ ಮೇಲೆ ಕುಳಿತಿರುವಂಥ ಕಲ್ಲುಗಳ ಆಯುಷ್ಯ ಮರಳಿಗಿಂತ ಮೊದಲಿನದ್ದು. ಮರಳು ಸುಮಾರು ನಾಲ್ಕು ಸಾವಿರ ವರ್ಷಗಳಷ್ಟು ಹಳೆಯದಾದ್ರೆ, ಕಲ್ಲುಗಳು ಮಾತ್ರ 7,000 ವರ್ಷಗಳಷ್ಟು ಹಳೆಯವು ಅಂತ ವಿಜ್ಞಾನಿಗಳು ಹೇಳಿದರು. ಹೀಗಾಗಿ ರಾಮಸೇತು ನೈಸರ್ಗಿಕ ನಿರ್ಮಿತಿ ಅಲ್ಲ, ಮಾನವರ ಪ್ರಯತ್ನದಿಂದ ರೂಪುಗೊಂಡಿದ್ದೆಂಬ ಪ್ರತಿಪಾದನೆಗೆ ಪುಷ್ಟಿ ದೊರೆಯಿತು.