ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಮೇಶ್ವರಂ ಕೆಫೆ ಬ್ಲಾಸ್ಟ್ ಸಂಭವಿಸಿ ಐದು ದಿನಗಳು ಕಳೆದರೂ ಆರೋಪಿ ಸಿಕ್ಕಿಬಿದ್ದಿಲ್ಲ. ಆರೋಪಿ ಎಲ್ಲಿಯೂ ತನ್ನ ಮುಖ ಕಾಣದಂತೆ ಓಡಾಡಿದ್ದಾನೆ.
ಇದೀಗ ಆರೋಪಿ ಮುಕ್ಕಾಲು ಗಂಟೆಯಲ್ಲಿ ಹತ್ತು ಬಸ್ಗಳಲ್ಲಿ ಸಂಚಾರ ಮಾಡಿದ್ದ ಎನ್ನುವ ವಿಷಯ ಹೊರಬಿದ್ದಿದೆ. ಎಲ್ಲಾ ಬಸ್ ನಿಲ್ದಾಣಗಳ ಬಗ್ಗೆ ಸರಿಯಾದ ಮಾಹಿತಿ ಹೊಂದಿದ್ದು, ಬರೋಬ್ಬರಿ ಹತ್ತು ಬಸ್ಗಳಲ್ಲಿ ಓಡಾಡಿದ್ದಾನೆ.
ಐಪಿಟಿಎಲ್ನಿಂದ ಬಸ್ ಹತ್ತಿದ ಆರೋಪಿ ತನಿಖೆ ದಿಕ್ಕು ತಪ್ಪಿಸಲು ಬೇರೆ ಬೇರೆ ಬಸ್ಗಳಲ್ಲಿ ಸಂಚಾರ ಮಾಡಿದ್ದಾನೆ. ಕೆಫೆಯಿಂದ ತೆರಳಿದ ನಂತರ ಕುಂದಲಹಳ್ಳಿಯಲ್ಲಿ ಬಸ್ ಹತ್ತಿ ಮುಂಚಿನ ಸ್ಟಾಪ್ನಲ್ಲಿ ಇಳಿದಿದ್ದಾನೆ. ಇದೇ ರೀತಿ ಮುಕ್ಕಾಲು ಗಂಟೆಯಲ್ಲಿ ಹತ್ತು ಬಸ್ ಬದಲಾಯಿಸಿದ್ದಾನೆ.
ಯಾವ ಬಸ್ ಹತ್ತಬೇಕು, ಎಲ್ಲಿ ಇಳಿಯಬೇಕು, ಮುಂದಿನ ನಿಲ್ದಾಣ ಯಾವುದು ಎಂಬೆಲ್ಲ ಬಗ್ಗೆ ಸ್ಪಷ್ಟ ಮಾಹಿತಿ ಅವನಲ್ಲಿತ್ತು. ಆತ ಸುತ್ತಮುತ್ತಲಿನ ನಿವಾಸಿಯೂ ಆಗಿರಬಹುದು ಎನ್ನುವ ಅನುಮಾನ ಎದುರಾಗಿದೆ.
ಹೊಟೇಲ್ಗೆ ಎಂಟ್ರಿ ನೀಡುವಾಗ ಆತ ಫೋನ್ನಲ್ಲಿ ಮಾತನಾಡಿಕೊಂಡು ಒಳಗೆ ಬಂದಿದ್ದು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಪೊಲೀಸರು ಟವರ್ ಡಂಪ್ ಮಾಡಿ ಆ ಸಮಯದಲ್ಲಿ ಸಕ್ರಿಯವಾಗಿದ್ದ ಎಲ್ಲ ಮೊಬೈಲ್ಗಳ ಪರೀಕ್ಷೆ ಮಾಡಿದ್ದಾರೆ. ಕತರ್ನಾಕ್ ಶಂಕಿತ ಉಗ್ರ ಪೊಲೀಸರ ದಿಕ್ಕು ತಪ್ಪಿಸಿ ಸಮಯ ಹಾಳು ಮಾಡಲು ಡಮ್ಮಿ ಫೋನ್ನಲ್ಲಿ ಮಾತನಾಡುವಂತೆ ನಾಟಕ ಆಡಿದ್ದಾನೆ ಎಂದು ತಿಳಿದಿದೆ.