ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜಕೀಯದಲ್ಲಿ ಹೊಸ ಅಧ್ಯಾಯ ಆರಂಭಿಸಿರುವ ಸ್ವಾತಿ ಮಲಿವಾಲ್, ಆಮ್ ಆದ್ಮಿ ಪಕ್ಷದ ಪಯಣಕ್ಕೆ ತೆರೆ ಎಳೆದು ಭಾರತೀಯ ಜನತಾ ಪಕ್ಷದ ಕೈ ಹಿಡಿದಿದ್ದಾರೆ. ದೆಹಲಿ ಬಿಜೆಪಿ ಘಟಕದ ನಾಯಕರ ಸಮ್ಮುಖದಲ್ಲಿ ಅವರು ಅಧಿಕೃತವಾಗಿ ಪಕ್ಷ ಸೇರ್ಪಡೆಯಾಗಿ, ರಾಜಧಾನಿಯ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣರಾಗಿದ್ದಾರೆ.
ಪಕ್ಷ ಸೇರ್ಪಡೆಯ ಬಳಿಕ ಮಾತನಾಡಿದ ಸ್ವಾತಿ ಮಲಿವಾಲ್, ಯಾವುದೇ ಒತ್ತಡ ಅಥವಾ ಬಲವಂತದಿಂದ ಈ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಸ್ಪಷ್ಟಪಡಿಸಿದರು. ಬಿಜೆಪಿ ಕೈಗೊಂಡಿರುವ ಹಲವು ಕಾರ್ಯಗಳು ಹಾಗೂ ಅದರ ಆಡಳಿತ ಮಾದರಿಯಿಂದ ಪ್ರೇರಣೆಗೊಂಡು ಈ ಹೆಜ್ಜೆ ಇಟ್ಟಿದ್ದೇನೆ ಎಂದು ಹೇಳಿದರು.
ಇದನ್ನೂ ಓದಿ:
ದೆಹಲಿ ಮಹಿಳಾ ಆಯೋಗದ ಮುಖ್ಯಸ್ಥೆಯಾಗಿ ಕೆಲಸ ಮಾಡಿದ ಅವಧಿಯನ್ನು ನೆನಪಿಸಿಕೊಂಡ ಅವರು, ಆ ಸಮಯದಲ್ಲಿ ವಿವಿಧ ವಿಚಾರಗಳಲ್ಲಿ ಬಿಜೆಪಿಯಿಂದ ಸಹಕಾರ ಮತ್ತು ಬೆಂಬಲ ದೊರೆತಿತ್ತು ಎಂದು ಶ್ಲಾಘಿಸಿದರು. ಇದೇ ಕಾರಣದಿಂದ ಹೊಸ ರಾಜಕೀಯ ಪಯಣ ಆರಂಭಿಸುತ್ತಿರುವುದು ಭಾವನಾತ್ಮಕ ಕ್ಷಣವಾಗಿದೆ ಎಂದರು.
ಇದೇ ವೇಳೆ ಆಮ್ ಆದ್ಮಿ ಪಕ್ಷ ಹಾಗೂ ಅದರ ನಾಯಕತ್ವದ ವಿರುದ್ಧ ಅಸಮಾಧಾನ ಹೊರಹಾಕಿದ ಅವರು, ಕಳೆದ ಕೆಲವು ವರ್ಷಗಳಲ್ಲಿ ಆಡಳಿತದಲ್ಲಿ ಭ್ರಷ್ಟಾಚಾರ ಮತ್ತು ದುರಾಡಳಿತ ಹೆಚ್ಚಾಗಿದೆ ಎಂದು ಆರೋಪಿಸಿದರು.



