ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರ ಭಾಗದಲ್ಲಿ ಎಡೆಬಿಡದೆ ಮಳೆಯಾಗುತ್ತಿದ್ದು, ಯಮುನಾ ನದಿ ಉಕ್ಕಿ ಹರಿಯುತ್ತಿದೆ. ಹರಿಯಾಣದಲ್ಲಿ ಭಾರೀ ಮಳೆಯಿಂದಾಗಿ ಯಮುನಾ ನದಿಯ ನೀರಿನ ಮಟ್ಟ ಮತ್ತೆ ಕ್ರಮೇಣ ಹೆಚ್ಚುತ್ತಿದೆ. ಸದ್ಯ ಆಗ್ರಾ ನಗರದ ಯಮುನಾ ನದಿಯಲ್ಲಿ ನೀರಿನ ಮಟ್ಟ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, 45 ವರ್ಷಗಳಲ್ಲಿ ಮೊದಲ ಬಾರಿಗೆ ಯಮುನಾ ನದಿಯ ನೀರು ಐತಿಹಾಸಿಕ ಕಟ್ಟಡ ತಾಜ್ ಮಹಲ್ ಗೋಡೆಗಳಿಗೆ ಅಪ್ಪಳಿಸಿತು.
ಯಮುನಾ ನದಿಯ ನೀರಿನಿಂದ ತಾಜ್ ಮಹಲ್ ಹಿಂಭಾಗದ ಉದ್ಯಾನವು 45 ವರ್ಷಗಳ ನಂತರ ಮೊದಲ ಬಾರಿಗೆ ಮುಳುಗಿದೆ. ಯಮುನಾ ನದಿ ನೀರಿನ ಮಟ್ಟ 497.9 ಅಡಿ ತಲುಪಿದೆ. ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗಿದ್ದು, ದಸರಾ ಘಾಟ್ಗೆ ಪ್ರವಾಹದ ನೀರು ನುಗ್ಗಿದೆ. ಇತಿಮದ್-ಉದ್-ದೌಲಾ ಸಮಾಧಿಯ ಹೊರ ಭಾಗಗಳಿಗೂ ನೀರು ನುಗ್ಗಿತು.
ರಾಮ್ಬಾಗ್, ಮೆಹ್ತಾಬ್ ಬಾಗ್, ಜೊಹ್ರಾ ಬಾಗ್, ಕಲಾ ಗುಂಬದ್ ಮತ್ತು ಚಿನಿ ಕಾ ರೌಜಾ ಮುಂತಾದ ಸ್ಮಾರಕಗಳು ಜಲಾವೃತಗೊಳ್ಳಲಿವೆ ಎಂದು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಈ ಸ್ಮಾರಕಗಳಿಗೆ ಇದುವರೆಗೆ ಯಾವುದೇ ಹಾನಿಯಾಗಿಲ್ಲ. ಆದರೆ ಯಮುನಾ ನದಿಯ ಹರಿವು ಹೆಚ್ಚಾಗಿರುವುದರಿಂದ ತಾಜ್ ಮಹಲ್ ಸೌಂದರ್ಯಕ್ಕೆ ಧಕ್ಕೆ ಉಂಟಾಗಬಹುದು ಎಂದು ಆಗ್ರಾ ಮೇಯರ್ ಹೇಳಿದ್ದಾರೆ.