ಹೊಸದಿಗಂತ ಡಿಜಿಟಲ್ ಡೆಸ್ಕ್:
ಸುಮಲತಾ ಅಂಬರೀಶ್ ಜೊತೆಗೆ ಮಾತುಕತೆಗೆ ಸಿದ್ದ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ಹೇಳಿದ್ದಾರೆ.
ಸುಮಲತಾ ಅವರ ಜೊತೆಗೆ ಮಾತುಕತೆ ಮಾಡ್ತೀನಿ. ಎಲ್ಲವೂ ಸುಗಮವಾಗಿ ನಡೆಯುತ್ತದೆ. ಸುಮಲತಾ ನನಗೆ ಶತ್ರು ಅಲ್ಲ. ಚುನಾವಣೆಗಳು ಬಂದಾಗ ಕೆಲವು ವಿಚಾರದಲ್ಲಿ ಕೆಲವು ಭಿನ್ನಾಭಿಪ್ರಾಯಗಳು ಬಂದಿರುತ್ತವೆ. ಆ ಸಂದರ್ಭದಲ್ಲಿ ಹಲವಾರು ರೀತಿ ಚರ್ಚೆಗಳು ಆಗಿರುತ್ತದೆ. ಅದನ್ನ ಈಗ ಇಟ್ಟುಕೊಳ್ಳುವ ಅವಶ್ಯಕತೆ ಇಲ್ಲ ಎಂದರು.
ಅಂಬರೀಶ್ ಅವರು ಬದುಕಿದ್ದಾಗ ಜೊತೆಗೂಡಿಯೇ ಊಟ ಮಾಡಿದ್ದೇವೆ. ಸುಮಲತಾ ಅವರೇ ನನಗೆ ಊಟ ಬಡಿಸಿದ್ದಾರೆ. ಅಂಬರೀಶ್ ಜೊತೆ ಊಟ ಮಾಡೋವಾಗ ಜೊತೆಯಲ್ಲಿ ಅವರ ಮನೆಯಲ್ಲಿ ಊಟ ಮಾಡಿದ್ದೇವೆ. ಆ ದಿನಗಳು ಇವೆ ಎಂದು ನೆನಪು ಮೆಲುಕು ಹಾಕಿದರು.
ರಾಜಕೀಯದಲ್ಲಿ ಕೆಲವು ಸನ್ನಿವೇಶಗಳಲ್ಲಿ ಇಂತಹ ಸಂಘರ್ಷಗಳು ಆಗಿರುತ್ತವೆ. ರಾಮಾಂಜನೇಯ ಯುದ್ದವೇ ಆಗಿ ಹೋಗಿದೆ. ಇನ್ನು ನಾವು ಹುಲು ಮಾನವರು. ನಮ್ಮಲ್ಲಿ ಯುದ್ದ ಆಗದೇ ಇರುತ್ತದೆಯಾ? ದೊಡ್ಡ ಮಟ್ಟದಲ್ಲಿ ಅದನ್ನೇ ಸಾಧಿಸಿಕೊಂಡು ಹೋಗೋ ಅವಶ್ಯಕತೆ ಇಲ್ಲ. ಸಮಯ ಬಂದಾಗ ಸುಮಲತಾ ಜೊತೆ ಮಾತನಾಡುತ್ತೇನೆ ಎಂದು ತಿಳಿಸಿದರು.