ಹೊಸದಿಗಂತ ವರದಿ, ಹುಬ್ಬಳ್ಳಿ:
ಒಂದು ಜವಾಬ್ದಾರಿಯುತ ಸ್ಥಾನದಲ್ಲಿ ಇದ್ದು, ದೇಶದ ಇಬ್ಭಾಗದ ಕುರಿತು ಮಾತನಾಡುವುದು ಖಂಡನೀಯ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹರಿಹಾಯ್ದರು.
ಸಂಸದ ಡಿ.ಕೆ ಸುರೇಶ ಅವರು ದೇಶ ಪ್ರತ್ಯೇಕ ಮಾಡಬೇಕು ಎಂಬ ಹೇಳಿಕೆಗೆ ನಗರದಲ್ಲಿ ಮಾಧ್ಯಮದವರೊಂದಿಗೆ ಈ ರೀತಿ ಪ್ರತಿಕ್ರಿಯೆ ನೀಡಿದರು.
ಸದ್ಯ ದೇಶದಲ್ಲಿ ಸಂವಿಧಾನದ 75 ನೇ ವರ್ಷದ ರಥಯಾತ್ರೆ ಆಚರಣೆ ಮಾಡಲಾಗುತ್ತಿದೆ. ಒಬ್ಬ ಜನಪ್ರತಿನಿಧಿಗಳು ಈ ರೀತಿ ಮಾತನಾಡುವುದು ಸರಿಯಲ್ಲ. ಭಾರತದ ಅಖಂಡತೆಯನ್ನು ಕಾಪಾಡುವುದಾಗಿ ಪ್ರಮಾಣ ವಚನ ಮಾಡಿರುತ್ತಾರೆ ಎಂದರು.
ರಾಜ್ಯಕ್ಕೆ ಯುಪಿಎ ಸರ್ಕಾರ ಇದ್ದಾಗ ಕೇವಲ 81 ಕೋಟಿ ತೆರಿಗೆ ಹಣ ಬಂದಿದ್ದು, ನಮ್ಮ ಸರ್ಕಾರ ಬಂದಮೇಲೆ 2 ಲಕ್ಷ ಕೋಟಿ ತೆರಿಗೆ ಹಣ ರಾಜ್ಯಕ್ಕೆ ಬಂದಿದೆ. ಆದರೂ ಕಾಂಗ್ರೆಸ್ ನಾಯಕರು ಅನುದಾನದಲ್ಲಿ ತಾರತಮ್ಯ ಆಗುತ್ತಿದೆ ಎಂದು ಆರೋಪ ಮಾಡುತ್ತಿದ್ದಾರೆ ಎಂದರು.
ಗ್ಯಾರಂಟಿ ರದ್ದು ಕುರಿತು ಕಾಂಗ್ರೆಸ್ ಶಾಸಕ ಬಾಲಕೃಷ್ಣ ವಿಚಾರ ಪ್ರತಿಕ್ರಿಸಿದ ಅವರು, ರಾಜ್ಯ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿಕೊಂಡಿದೆ. ಹಣ ಕ್ರೋಢಿಕರಣ ಮಾಡುವುದಕ್ಕೆ ಸಿಎಂ ಪರದಾಡುತ್ತಿದ್ದಾರೆ. ಭರವಸೆ ನೀಡಿದಂತೆ ಗ್ಯಾರಂಟಿಗಳನ್ನು ರಾಜ್ಯದ ಜನತೆಗೆ ಈಡೇರಿಸಲು ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು.
ಆದ್ದರಿಂದ ಶಾಸಕರ ಮೂಲಕ ಗ್ಯಾರಂಟಿಗಳ ಸ್ಥಗಿತದ ಬಗ್ಗೆ ಹೇಳಿಕೆ ಕೊಡಿಸುತ್ತಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆ ಗೆಲ್ಲಿಸದಿದ್ದರೆ ಗ್ಯಾರಂಟಿ ಸ್ಥಗಿತದ ಬೆದರಿಕೆ ಜನರಿಗೆ ಹಾಕುತ್ತಿದ್ದಾರೆ. ಇದು ಶಾಸಕರ ಹೇಳಿದಲ್ಲಾ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆಯಾಗಿದೆ ಎಂದು ತಿಳಿಸಿದರು.
ಕಾಂಗ್ರೆಸ್ ಏನೇ ಮಾಡಿದರೂ ಪ್ರಧಾನಿ ಮೋದಿ ಅವರನ್ನು ಸೋಲಿಸಲು ಆಗುವುದಿಲ್ಲ. ಈ ಬಾರಿ ರಾಜ್ಯದಲ್ಲಿ ೨೮ ಸ್ಥಾನ ಗೆಲ್ಲುತ್ತೇವೆ ಎಂದು ಭರವಸೆ ವ್ಯಕ್ತಪಡಿಸಿದರು.