ಕುಟುಂಬ ʼಥೋಡೋʼ ಮಾಡಿರುವವರು ಜೋಡೋ ಬಗ್ಗೆ ಮಾತನಾಡುತ್ತಿದ್ದಾರೆ: ಕುಮಾರ್ ಬಂಗಾರಪ್ಪ ವಾಗ್ದಾಳಿ

ಹೊಸದಿಗಂತ ವರದಿ, ಶಿವಮೊಗ್ಗ:
ಕುಟುಂಬವನ್ನೇ ಥೋಡೋ ಮಾಡಿರುವ ಕಾಂಗ್ರೆಸ್ ಹಿಂದುಳಿದ ವರ್ಗಗಳ ಮೋರ್ಚಾ ರಾಜ್ಯಾಧ್ಯಕ್ಷ ಈಗ ಭಾರತ್ ಜೋಡೋ ಯಾತ್ರೆ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಮಧು ಬಂಗಾರಪ್ಪ ಬಗ್ಗೆ ಪರೋಕ್ಷವಾಗಿ ಶಾಸಕ ಕುಮಾರ್ ಬಂಗಾರಪ್ಪ ವ್ಯಂಗ್ಯವಾಡಿದ್ದಾರೆ.
ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ವಿರೇಂದ್ರ ಪಾಟೀಲ್, ದೇವರಾಜ ಅರಸು, ಎಸ್.ಬಂಗಾರಪ್ಪ ಅವರನ್ನು ಕಾಂಗ್ರೆಸ್ ನಡೆಸಿಕೊಂಡ ರೀತಿಯ ಬಗ್ಗೆ ಬಿಜೆಪಿ ವತಿಯಿಂದ ಜಾಹೀರಾತು ನೀಡಲಾಗಿತ್ತು. ಅದನ್ನು ಇಟ್ಟುಕೊಂಡು ಕಾಂಗ್ರೆಸ್ ಒಬಿಸಿ ಮೋರ್ಚಾ ಅಧ್ಯಕ್ಷರು ಮಾತನಾಡಿದ್ದಾರೆ. ಅಳಿದೂರಿಗೆ ಉಳಿದವನೇ ಗೌಡ ಎನ್ನುವಂತೆ ಆ ಪಕ್ಷದಲ್ಲಿ ಯಾರೂ ಇಲ್ಲದಿರುವುದರಿಂದ ಅವರಿಗೆ ಈ ಹುದ್ದೆ ಕೊಟ್ಟಿದ್ದಾರೆ. ಅದಕ್ಕಾಗಿ ಮಿತಿಮೀರಿ ಮತ್ತು ಹುಂಬತನದಿಂದ ಮಾತನಾಡಿದ್ದಾರೆ. ಬಿಜೆಪಿ ಬಗ್ಗೆ ಮಾತನಾಡುವಾಗ ಬಿ ಕೆರ್‌ಫುಲ್ ಎಂದು ಎಚ್ಚರಿಕೆ ನೀಡಿದರು.
ಅವರನ್ನು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷರನ್ನಾಗಿ ಮಾಡಲಾಗಿತ್ತು. ಅಲ್ಲಿಯೂ ಥೋಡೋ ಮಾಡಿ ಬಂದಿದ್ದಾರೆ. ಇವರು ಯಾಕೆ ಹೋದರು ಎಂಬುದನ್ನು ಕುಮಾರಸ್ವಾಮಿ ಅವರೇ ಹೇಳಿದ್ದಾರೆ. ಇವರು ಅಲ್ಲಿದ್ದಾಗ ಹೇಗೆ ಚುನಾವಣೆ ಮಾಡಿದರು ಎಂಬುದನ್ನೂ ಹೇಳಿದ್ದಾರೆ. ಬಹಿರಂಗವಾಗಿ ಇವರ ಬಗ್ಗೆ ಹೇಳಿದರೆ ತಡೆದುಕೊಳ್ಳಲು ಅವರಿಗೆ ಸಾಧ್ಯವಾಗುವುದಿಲ್ಲ ಎಂದು ಕುಟುಕಿದರು.
ಭ್ರಷ್ಟಾಚಾರದ ಬಗ್ಗೆ ಬಹಳ ಮಾತನಾಡಿದ್ದಾರೆ. ಇವರ ಕಾಲದ ಬಗರ್‌ಹುಕುಂ ಮಂಜೂರಾತಿ ಗಮನಿಸಿದರೆ ಭ್ರಷ್ಟಾಚಾರ ಹೇಗೆ ಮಾಡಿದರು ಎಂಬುದು ಗೊತ್ತಾಗುತ್ತದೆ. ಸರ್ಕಾರಿ ನೌಕರರು, ಬಿಎಸ್‌ಎನ್‌ಎಲ್, ಪೊಲೀಸ್ ಇಲಾಖೆಯವರಿಗೂ ಭೂಮಿ ಮಂಜೂರಾಗಿದೆ. ಕಾರವಾರ, ಭಟ್ಕಳದವರಿಗೂ ಜಮೀನು ಮಂಜೂರು ಮಾಡಿದ್ದಾರೆ. ಶರಾವತಿ ಡೆಂಟಲ್ ಕಾಲೇಜು ಹಗರಣ, ಬಗರ್‌ಹುಕುಂ ಮಂಜೂರು ಹಗರಣದ ಸೂತ್ರಧಾರ ಈಗ ಭ್ರಷ್ಟಾಚಾರದ ಬಗ್ಗೆ ಉದ್ದುದ್ದ ಮಾತನಾಡುತ್ತಿದ್ದಾರೆ ಎಂದು ಲೇವಡಿ ಮಾಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!