ಹೊಸ ದಿಗಂತ ವರದಿ, ಹುಬ್ಬಳ್ಳಿ:
ಕಾಂಗ್ರೆಸ್ ಸಂವಿಧಾನದ ಕುತ್ತಿಗೆ ಹಿಚುಕಿ, ಅದು ಸಾರ್ವಜನಿಕರಿಗೆ ನೀಡಿದ ಮೂಲಭೂತ ಹಕ್ಕುಗಳನ್ನು ಮೊಟಕುಗೊಳಿಸಿದ ಪಕ್ಷದಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಇದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಂವಿಧಾನದ ಆಶಯದ ಬಗ್ಗೆ ಮಾತನಾಡುವ ಸಿದ್ದರಾಮಯ್ಯ ಅವರು ಸದ್ಯ ಯಾವ ಪಕ್ಷದಲ್ಲಿದ್ದಾರೆ ಎಂದು ನೆನಪು ಮಾಡಿಕೊಳ್ಳಬೇಕು ಎಂದರು.
ಸಂವಿಧಾನ ರಚಿಸಿದ ಡಾ. ಬಿ.ಆರ್ ಅಂಬೇಡ್ಕರ್ ಅವರ ಜೀವ ಇರುವರೆಗೂ ಅಪಮಾನ, ನಿರ್ಲಕ್ಷ್ಯ ಹಾಗೂ ಅವರೊಂದಿಗೆ ದ್ವೇಷ ಸಾಧಿಸಿದ್ದಾರೆ. ವಿಧಿವಶರಾದ ಬಳಿಕ ದೆಹಲಿಯಲ್ಲಿ ಅಂಬೇಡ್ಕರ್ ಸಮಾಧಿಗೆ ಸ್ವಲ್ಪವೂ ಜಾಗ ನೀಡಲಾರದ ಪಕ್ಷದಲ್ಲಿದ್ದು, ಸಂವಿಧಾನ ಬಗ್ಗೆ ಸಿದ್ದರಾಮಯ್ಯ ಮಾತನಾಡುತ್ತಿರುವುದ ಎಷ್ಟು ಸರಿ ಎಂದು ಹರಿಹಾಯ್ದರು.
ತುರ್ತು ಪರಿಸ್ಥಿತಿಯ ಬಗ್ಗೆ ಸಿದ್ದರಾಮಯ್ಯ ನೆನಪು ಮಾಡಿಕೊಂಡಾಗ ಜ್ಞಾನೋದಯವಾಗುತ್ತದೆ. ಅವರ ಕಾಲದಲ್ಲಿ ಪಿಎಫ್ಐ ಸಂಘಟನೆ ಬೆಂಬಲ ನೀಡಿ ಎಷ್ಟೋ ಹಿಂದೂಳಿದ ವರ್ಗದ ಹಾಗೂ ಎಸ್ಟಿ ಜನರ ಸಾವಿಗೆ ಕಾರಣರಾಗಿದ್ದಾರೆ ಎಂದರು.
ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಅವರು ದೆಹಲಿಗೆ ಯಾಕೆ ಬರುತ್ತಿದ್ದಾರೆ ಗೊತ್ತಿಲ್ಲ. ಏಕರೂಪ ನ್ಯಾಯ ಸಂಹಿತೆ ಈಗಾಗಲೇ ಹಲವಾರು ರಾಜ್ಯದಲ್ಲಿ ಜಾರಿಯಾಗುತ್ತಿದೆ. ರಾಜ್ಯದಲ್ಲಿ ಮುಖ್ಯ ಮಂತ್ರಿ ಅವರು ನಿರ್ಧಾರ ಕೈಗೊಳ್ಳುತ್ತಾರೆ ಎಂದು ತಿಳಿಸಿದರು.