ಹೊಸದಿಗಂತ ಡಿಜಿಟಲ್ ಡೆಸ್ಕ್
ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಈಗ ಮತ್ತೆ ಸದ್ದು ಮಾಡುತ್ತಿದ್ದಾರೆ. ಆದರೆ ಈ ಬಾರಿ ಉದಯನಿಧಿ ಸ್ಟಾಲಿನ್ ಸುದ್ದಿಯಾಗಿ, ಸದ್ದು ಮಾಡುತ್ತಿರುವುದು ಸನಾತನ ಹಿಂದು ಧರ್ಮದ ಕಾರಣಕ್ಕೆ ಅಲ್ಲ. ಬದಲಾಗಿ ಐಸಿಸಿ ಏಕದಿನ ವಿಶ್ವಕಪ್ ಫೈನಲ್ ಮ್ಯಾಚ್ ಬಗ್ಗೆ ಮಾತನಾಡಿದ್ದು, ವೈರಲ್ ಆಗುತ್ತಿದೆ.
ತಮಿಳುನಾಡಿನ ಕ್ರೀಡಾ ಸಚಿವರೂ ಆದ ಉದಯನಿಧಿ ಸ್ಟಾಲಿನ್ಗೆ ಕ್ರಿಕೆಟ್ ಅಂದರೆ ಇಷ್ಟವಂತೆ. ಅದ್ರಲ್ಲೂ ಐಸಿಸಿ ವಿಶ್ವಕಪ್ ಬಗ್ಗೆಯೂ ಅವರಿಗೆ ತುಂಬಾ ಆಸಕ್ತಿ ಇದೆಯಂತೆ. ಹೀಗೆ ಎಲ್ಲಾ ಕ್ರಿಕೆಟ್ ಪ್ರೇಮಿಗಳಿಗೂ ಇರುವಂತೆ ಖುದ್ದಾಗಿ ಕ್ರೀಡಾಂಗಣಕ್ಕೆ ಹೋಗಿ ಮ್ಯಾಚ್ ನೋಡುವ ಆಸೆ ಉದಯನಿಧಿ ಸ್ಟಾಲಿನ್ಗೆ ಇದೆ. ಆದ್ರೂ ಭಾರತ VS ಆಸ್ಟ್ರೇಲಿಯಾ ನಡುವೆ ನಡೆಯಲಿರುವ, ಫೈನಲ್ ಪಂದ್ಯಕ್ಕೆ ಟಿಕೆಟ್ ಸಿಕ್ಕಿಲ್ಲವಂತೆ. ಇದನ್ನ ಖುದ್ದು ಉದಯನಿಧಿ ಸ್ಟಾಲಿನ್ ಅವರೇ ಹೇಳಿಕೊಂಡು ಬೇಸರ ಹೊರಹಾಕಿದ್ದಾರೆ.
ಎಲ್ಲರಂತೆ ನಾನು ಕೂಡ ಐಸಿಸಿ ವಿಶ್ವಕಪ್ ಫೈನಲ್ ಪಂದ್ಯಕ್ಕೆ ಕಾಯುತ್ತಿದ್ದೇನೆ. ಆದರೆ ನನಗೆ ಈವರೆಗೂ ಟಿಕೆಟ್ ಸಿಕ್ಕಿಲ್ಲ. ಟಿಕೆಟ್ಗಳು ಖಾಲಿ ಆಗಿವೆ ಅಂತಾ ಹೇಳಿದ್ದಾರೆ. ಹೀಗಾಗಿ ಟಿಕೆಟ್ ಸಿಕ್ಕರೆ ನಾನು ಕೂಡ ಖುದ್ದು ಅಲ್ಲಿಗೆ ತೆರಳಿ ಪಂದ್ಯ ನೋಡ್ತೀನಿ ಎಂದಿದ್ದಾರೆ. 2023 ಐಸಿಸಿ ಏಕದಿನ ವಿಶ್ವಕಪ್ ಫೈನಲ್ ಪಂದ್ಯ ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಆಯೋಜನೆ ಆಗಿದೆ. ಈ ಕಾರಣ ಪಂದ್ಯ ನೋಡಲು ಇಚ್ಛಿಸುವವರು ಗುಜರಾತ್ ರಾಜಧಾನಿಗೆ ಪ್ರಯಾಣ ಬೆಳೆಸಬೇಕಿದೆ.