ಹೊಸ ದಿಗಂತ ವರದಿ, ಮಂಡ್ಯ :
ಕರ್ನಾಟಕದ ಕಾವೇರಿಗಾಗಿ ಏನೂ ಕೊಡುಗೆ ನೀಡದ ತಮಿಳುನಾಡು ಸರ್ಕಾರ ಕೇವಲ ನೀರಿಗಾಗಿ ಹಪಹಪಿಸುತ್ತಿದೆ ಎಂದು ಇತಿಹಾಸ ಸಂಶೋಧಕ ಡಾ. ತಲಕಾಡು ಚಿಕ್ಕರಂಗೇಗೌಡ ಆರೋಪಿಸಿದರು.
ನಗರದ ಸರ್ ಎಂ.ವಿ. ಪ್ರತಿಮೆ ಬಳಿ ರೈತ ಹಿತರಕ್ಷಣಾ ಸಮಿತಿ ವತಿಯಿಂದ ನಡೆಯುತ್ತಿರುವ ಧರಣಿ ಸತ್ಯಾಗ್ರಹದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪಶ್ಚಿಮ ಘಟ್ಟ ಅರಣ್ಯ ವ್ಯಾಪ್ತಿಯನ್ನು ನಿರ್ವಹಣೆ ಮಾಡಲು ಕರ್ನಾಟಕ, ಕೇರಳ, ಮಹಾರಾಷ್ಟ್ರ ರಾಜ್ಯ ಸರ್ಕಾರಗಳು ಕೋಟ್ಯಾಂತರ ರೂ. ಖರ್ಚು ಮಾಡುತ್ತಿವೆ. ಆದರೆ ಕಾವೇರಿ ಕಣಿವೆಯ ಅರಣ್ಯ ಪ್ರದೇಶವನ್ನು ಸಂರಕ್ಷಿಸುವಲ್ಲಿ ತಮಿಳುನಾಡು ಸರ್ಕಾರ ಒಂದೇ ಒಂದು ರೂ.ಗಳನ್ನು ಖರ್ಚು ಮಾಡದೆ ನೀರಿಗಾಗಿ ಮಾತ್ರ ತಗಾದೆ ತೆಗೆಯುತ್ತಿದೆ ಎಂದು ದೂರಿದರು.
ತಮಿಳುನಾಡಿಗೆ ಕರ್ನಾಟಕದ ಹಳೆ ಮೈಸೂರು ಭಾಗ, ಆಂಧ್ರಪ್ರದೇಶದ ದಕ್ಷಿಣ ಭಾಗ, ಕೇರಳ ಸೇರಿ ಐದು ಜಲಮೂಲಗಳಿವೆ, ಇದನ್ನು ಮರೆಮಾಚಿ ಪ್ರಾಧಿಕಾರದ ಎದುರು ಕರ್ನಾಟಕದ ಬಿಡಬೇಕಾದ ನೀರಿನ ಹಕ್ಕನ್ನು ಮಾತ್ರ ಪ್ರತಿಪಾದಿಸುತ್ತಿದೆ ಎಂದು ತಮಿಳುನಾಡು ಸರ್ಕಾರದ ವಿರುದ್ಧ ಹರಿಹಾಯ್ದರು.
ಮೂರನೇ ಒಂದರಷ್ಟು ಅರಣ್ಯ ಸಂರಕ್ಷಿಸದೆ ಕಾವೇರಿ ಜಲಾನಯನ ವ್ಯಾಪ್ತಿಯಲ್ಲಿ ನೀರಾವರಿ ಪ್ರದೇಶ ವಿಸ್ತರಣೆ ಮಾಡಿಕೊಂಡಿದೆ, ಬೆಂಗಳೂರಿನ ಯಲಹಂಕ ಪ್ರದೇಶಕ್ಕೆ ಕಾವೇರಿ ನೀರು ನೀಡುವ ಯೋಜನೆಗೆ ಕಾವೇರಿ ವ್ಯಾಪ್ತಿಗೆ ಸದರಿ ಪ್ರದೇಶ ಬರುವುದಿಲ್ಲ ಎಂದು ಅಡ್ಡಗಾಲು ಹಾಕಿದ್ದರು. ಕಾವೇರಿ ನೀರಿನ ಹೆಚ್ಚಿನ ಪಾಲನ್ನು ಪಡೆಯುತ್ತಿರುವ ತಮಿಳುನಾಡಿನ ಕೊಡುಗೆಯಾದರೂ ಏನು ಎಂದು ಪ್ರಶ್ನಿಸಿದರು.