ರೈತ ವಿರೋಧಿ, ರಾಮ ವಿರೋಧಿ, ಹಿಂದು ವಿರೋಧಿ ಕಾಂಗ್ರೆಸ್ ಸರಕಾರಕ್ಕೆ ಪಾಠ ಕಲಿಸಿ: ಬಿ.ವೈ.ವಿಜಯೇಂದ್ರ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರು: ಹಲವಾರು ದಶಕಗಳಿಂದ ಅಯೋಧ್ಯೆಯಲ್ಲಿ ಶ್ರೀರಾಮನ ಮಂದಿರಕ್ಕಾಗಿ ನಿರಂತರ ಹೋರಾಟ ನಡೆಯುತ್ತಿತ್ತು. ಇನ್ನೊಂದೆಡೆ ಜಮ್ಮು-ಕಾಶ್ಮೀರದ 370ನೇ ವಿಧಿ ರದ್ದತಿಗಾಗಿ ಒತ್ತಾಯ ನಡೆದಿತ್ತು. ಆ ಎರಡೂ ಆಶಯಗಳು ಇದೀಗ ಈಡೇರುತ್ತಿವೆ ಎಂದು ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ತಿಳಿಸಿದರು.

ಬಿಜೆಪಿ ಬೆಂಗಳೂರು ಉತ್ತರ ಜಿಲ್ಲೆ ವತಿಯಿಂದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮತ್ತು ವಿಪಕ್ಷ ನಾಯಕ ಆರ್.ಅಶೋಕ್ ಅವರಿಗೆ ಇಂದು ಅಭಿನಂದನಾ ಸಮಾರಂಭ ನಡೆಯಿತು.

ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ಮೋದಿಜೀ ಅವರು ದೇಶದ ಪ್ರಧಾನಮಂತ್ರಿಯಾಗಿ ಸುಮಾರು ಒಂಬತ್ತೂವರೆ ವರ್ಷ ಕಳೆದಿದೆ. ಒಂದು ದಿನವೂ ರಜೆ ತೆಗೆದುಕೊಳ್ಳದೆ ತಪಸ್ಸಿನ ರೀತಿ ಅಭಿವೃದ್ಧಿಗಾಗಿ ಕೆಲಸ ಮಾಡುತ್ತಿರುವ ಪ್ರಧಾನಿ ಮೋದಿ ಎಂದು ತಿಳಿಸಿದರು.

ಬಿಜೆಪಿ ವಿರುದ್ಧ ಆರೋಪಗಳು, ಗ್ಯಾರಂಟಿ ಮೂಲಕ ಕಾಂಗ್ರೆಸ್ ಪಕ್ಷ ಅಧಿಕಾರ ಪಡೆಯಿತು. ಇದು ಶೇ 80 ಭ್ರಷ್ಟಾಚಾರದ ಸರಕಾರ. ಇದು ಅಲ್ಪಸಂಖ್ಯಾತರ ತುಷ್ಟೀಕರಣದ ಸರಕಾರ ಎಂದು ಟೀಕಿಸಿದರು. ಬರಗಾಲದ ಸಂದರ್ಭದಲ್ಲಿ 550ರಷ್ಟು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರೂ ಒಂದು ಪೈಸೆ ನೀಡದ ಸರಕಾರವು ಅಲ್ಪಸಂಖ್ಯಾತರಿಗೆ 10 ಸಾವಿರ ಕೋಟಿ ಕೊಡುವುದಾಗಿ ತಿಳಿಸುತ್ತದೆ. ಇದು ಹಿಂದೂ ವಿರೋಧಿ, ರೈತ ವಿರೋಧಿ ಸರಕಾರ ಎಂದು ಟೀಕಿಸಿದರು.

ಹಿಂದೂಗಳನ್ನು ಬೆದರಿಸಲು ಮುಂದಾದ ರಾಜ್ಯದ ಕಾಂಗ್ರೆಸ್ ಸರಕಾರಕ್ಕೆ ಜನತೆ ತಕ್ಕ ಪಾಠ ಕಲಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಕಾಂಗ್ರೆಸ್ ಪಕ್ಷದ ಗೊಡ್ಡು ಬೆದರಿಕೆಗೆ ನಮ್ಮ ಕಾರ್ಯಕರ್ತರು ಹೆದರುವುದಿಲ್ಲ. ಹುಬ್ಬಳ್ಳಿಯ ಬಂಧಿತ ಶ್ರೀಕಾಂತ್ ಅವರ ಬಿಡುಗಡೆಗೆ ಆಗ್ರಹಿಸಿ ನಾಳೆ ದಿನ ರಾಜ್ಯಾದ್ಯಂತ ಪ್ರತಿಭಟನೆ ಮಾಡುತ್ತೇವೆ. ಕಾರ್ಯಕರ್ತರೆಲ್ಲರೂ ನಾಳೆ ಹೋರಾಟದಲ್ಲಿ ಭಾಗವಹಿಸಿ, ರಾಮವಿರೋಧಿ, ಹಿಂದೂ ವಿರೋಧಿ ಸರಕಾರಕ್ಕೆ ಎಚ್ಚರಿಕೆ ಕೊಡಬೇಕು ಎಂದು ಮನವಿ ಮಾಡಿದರು.

ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಬಗ್ಗೆ ಜನರಿಗೆ ಭರವಸೆ ಇಲ್ಲ. ಪಂಚರಾಜ್ಯಗಳ ಚುನಾವಣೆಯಲ್ಲಿ ಮೋದಿಜೀ ಗ್ಯಾರಂಟಿ ಕುರಿತು ಜನರು ಒಲವು ತೋರಿದ್ದಾರೆ. 28ಕ್ಕೆ 28 ಕ್ಷೇತ್ರ ಗೆದ್ದು ನಾವು ಕಾಂಗ್ರೆಸ್‍ಗೆ ಉತ್ತರ ಕೊಡೋಣ. ಬಿಬಿಎಂಪಿ, ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯತ್ ಚುನಾವಣೆಯಲ್ಲೂ ಉತ್ತಮ ಗೆಲುವು ನಮ್ಮದಾಗಬೇಕಿದೆ ಎಂದು ತಿಳಿಸಿದರು.

ಒಡೆಯುವ ಕೆಲಸದಲ್ಲಿ ಸಿದ್ದರಾಮಯ್ಯ: ಆರ್.ಆಶೋಕ್
ವಿಪಕ್ಷ ನಾಯಕ ಆರ್.ಅಶೋಕ್ ಅವರು ಮಾತನಾಡಿ, ಬಿಜೆಪಿ ಮುಂದೆ ಸಿದ್ದರಾಮಯ್ಯನವರ ಸರಕಾರವು ಭೂತದಂತೆ ನಿಂತಿದೆ ಎಂದು ನುಡಿದರು. ಹುಬ್ಬಳ್ಳಿಯಲ್ಲಿ 30 ವರ್ಷಗಳ ಹಿಂದಿನ ಕೇಸನ್ನು ಇದೀಗ ತೆರೆದು ನೋಟಿಸ್ ಕೊಡದೆ ಬಂಧಿಸುವ ಕಾರ್ಯ ನಡೆದಿದೆ ಎಂದು ಆಕ್ಷೇಪಿಸಿದರು. ಕಾಂಗ್ರೆಸ್ ಮತ ರಾಜಕೀಯಕ್ಕಾಗಿ ಹಿಂದೂ- ಮುಸಲ್ಮಾನರನ್ನು ಒಡೆಯುವ ಕೆಲಸ ಮಾಡುತ್ತಿದೆ ಎಂದು ದೂರಿದರು.

ಇಂಥ ನೂರು ಸಿದ್ದರಾಮಯ್ಯನವರು ಬಂದರೂ ರಾಮಭಕ್ತರು ಹೆದರುವುದಿಲ್ಲ. ಅಕ್ಷತೆ ಕೊಡುವುದಕ್ಕೂ ಅಡ್ಡಿ ಉಂಟು ಮಾಡುತ್ತಿದ್ದಾರೆ. ಇದು ಟಿಪ್ಪು ಸರಕಾರವೇ ಎಂದು ಪ್ರಶ್ನಿಸಿದರು. ರಾವಣನೂ ಅಧಿಕಾರ ಕಳಕೊಂಡ. ನೀವು ಉಳಿಯುವುದಿಲ್ಲ ಎಂದು ಎಚ್ಚರಿಕೆ ನೀಡಿದರು. ರಾಮರಾಜ್ಯವೂ ಮುಂದೆ ಮೋದಿಜೀ ಅವರ ನೇತೃತ್ವದಲ್ಲಿ ನಡೆಯಲಿದೆ ಎಂದು ಭರವಸೆಯಿಂದ ನುಡಿದರು. ನಾಳೆ ಇಡೀ ರಾಜ್ಯದಲ್ಲಿ ಬಿಜೆಪಿ ಪ್ರತಿಭಟನೆ ನಡೆಯಲಿದೆ ಎಂದು ತಿಳಿಸಿದರು.

ನೋಟಿಸ್ ಕೊಡದೆ ಬಂಧಿಸಿದ್ದೇಕೆ? 30 ವರ್ಷ ಅದೇ ರಸ್ತೆಯಲ್ಲಿ ಓಡಾಡುತ್ತಿದ್ದವರನ್ನು ಬಂಧಿಸಿಲ್ಲವೇಕೆ? ಕಾಂಗ್ರೆಸ್ ಸರಕಾರ ತುಘಲಕ್ ಸರಕಾರದಂತೆ ವರ್ತಿಸುತ್ತಿದೆ. ರೈತರ ಆತ್ಮಹತ್ಯೆ, ರೈತರಿಗೆ ಬರ ಪರಿಹಾರ ಕೊಡದ ಸರಕಾರ ಮುಸಲ್ಮಾನರಿಗೆ 11 ಸಾವಿರ ಕೋಟಿ ನೀಡಲು ಮುಂದಾಗಿದೆ ಎಂದು ಟೀಕಿಸಿದರು. ಸಿದ್ದರಾಮಯ್ಯರದು ಒಡೆದಾಳುವ ನೀತಿ. ಸಿದ್ದರಾಮಯ್ಯರು ಒಡೆದು ಆಳುವ ಬ್ರ್ಯಾಂಡ್ ಅಂಬಾಸಿಡರ್ ಎಂದರು.

ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ರಾಜೇಶ್ ಜಿ.ವಿ, ಮಾಜಿ ಮುಖ್ಯಮಂತ್ರಿ ಮತ್ತು ಸಂಸದ ಡಿ.ವಿ. ಸದಾನಂದ ಗೌಡ, ಮಾಜಿ ಸಚಿವರಾದ ಡಾ. ಸಿ.ಎನ್.ಅಶ್ವಥ್‍ನಾರಾಯಣ್, ಕೆ. ಗೋಪಾಲಯ್ಯ, ಬೈರತಿ ಬಸವರಾಜ್, ರಾಜ್ಯ ಪ್ರಧಾನ ಕಾರ್ಯದರ್ಶಿ ನಂದೀಶ್ ರೆಡ್ಡಿ, ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಬಿ. ನಾರಾಯಣಗೌಡ, ಶಾಸಕರು, ವಿಧಾನಪರಿಷತ್ ಸದಸ್ಯರು, ಮಾಜಿ ಶಾಸಕರು, ಮಾಜಿ ವಿಧಾನಪರಿಷತ್ ಸದಸ್ಯರು, ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!