ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಂಗಾಳ ಶಾಲಾ ಶಿಕ್ಷಕರ ನೇಮಕಾತಿ ಹಗರಣದ ಆರೋಪಿಯಾಗಿರುವ ಮಾಜಿ ಸಚಿವ ಪಾರ್ಥ ಚಟರ್ಜಿ ಹಾಗೂ ಅವರ ಆಪ್ತೆ ಅರ್ಪಿತಾ ಮುಖರ್ಜಿಗೆ ಈಗ 14 ದಿನ ನ್ಯಾಯಾಂಗ ಬಂಧನ ಶಿಕ್ಷೆಯನ್ನು ವಿಧಿಸಲಾಗಿದೆ.
ಜೊತೆಗೆ ಗಸ್ಟ್ 18 ರಂದು ಈ ಪ್ರಕರಣದ ಮುಂದಿನ ವಿಚಾರಣೆ ನಡೆಯಲಿದೆ ಎಂದು ತಿಳಿದುಬಂದಿದೆ.
ಬಂಗಾಳದ ಮಾಜಿ ಶಿಕ್ಷಣ ಸಚಿವ ಹಾಗೂ ಅರ್ಪಿತಾ ಮುಖರ್ಜಿಯನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಜಾರಿ ನಿರ್ದೇಶನಾಲಯ ಮನವಿ ಮಾಡಿಕೊಂಡಿತ್ತು. ವಿಚಾರಣೆ ನಡೆಸಬೇಕೆಂದು ಕೇಂದ್ರ ತನಿಖಾ ಸಂಸ್ಥೆಯ ವಕೀಲರು ಕೋರ್ಟ್ನಲ್ಲಿ ಹೇಳಿದ್ದರು. ಅಲ್ಲದೆ, ಪಾರ್ಥ ಚಟರ್ಜಿಅವರುಈ ಹಗರಣದ ಅತ್ಯಂತ ಶಕ್ತಿಶಾಲಿ ವ್ಯಕ್ತಿ ಎಂದು ಹೇಳಿದ್ದರು. ಮತ್ತೊಂದೆಡೆ, ಮಾಜಿ ಸಚಿವರ ಪರ ವಕೀಲರು ಜಾಮೀನಿಗಾಗಿ ಮನವಿ ಸಲ್ಲಿಸಿದ್ದರು. ಎರಡೂ ಕಡೆಯ ವಾದ ವಿವಾದ ಆಲಿಸಿದ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ ವಿಶೇಷ ಕೋರ್ಟ್ ಜಡ್ಜ್ ಜಿಬೋನ್ ಕುಮಾರ್ ಸಾಧು ತೀರ್ಪನ್ನು ಕೆಲ ಕಾಲ ಕಾಯ್ದಿರಿಸಿದ್ದರು.
ನಂತರ, ಮಾಜಿ ಸಚಿವ ಹಾಗೂ ಅವರ ಆಪ್ತೆ ಅರ್ಪಿತಾ ಮುಖರ್ಜಿಯನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಕಳಿಸಲಾಗಿದೆ.
ಅರ್ಪಿತಾ ಅವರನ್ನು ಆಲಿಪೋರ್ ಮಹಿಳಾ ಕರೆಕ್ಷನಲ್ ಹೋಂನಲ್ಲಿ ಇರಿಸಲಾಗುತ್ತದೆ ಹಾಗೂ ಪಾರ್ಥ ಚಟರ್ಜಿಯನ್ನು ಪ್ರೆಸಿಡೆನ್ಸಿ ಜೈಲಿನಲ್ಲಿ ಇಡಲಾಗುತ್ತದೆ ಎಂದು ತಿಳಿದುಬಂದಿದೆ.