ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇರಳದ ವಯಾನಾಡು ಭೂಕುಸಿತಕ್ಕೆ ಸಾವಿನ ಸಂಖ್ಯೆ 300 ದಾಟಿದೆ. ಹಿಮಾಚಲ ಪ್ರದೇಶ, ಉತ್ತರಖಂಡದಲ್ಲೂ ಭಾರೀ ಮಳೆಯಾಗುತ್ತಿದ್ದು, ಭೂಕುಸಿತ, ಪ್ರವಾಹ ಸಂಭವಿಸಿ ಹಲವರು ಮೃತಪಟ್ಟಿದ್ದಾರೆ. ಎಲ್ಲೆಡೆ ರಕ್ಷಣಾ ಕಾರ್ಯಾಚರಣೆ ನಿರಂತರವಾಗಿ ನಡೆಯುತ್ತಿದೆ.
ಇದರ ನಡುವೆ ಹವಾಮಾನ ಇಲಾಖೆಯಿಂದ ಮತ್ತೊಂದು ಎಚ್ಚರಿಕೆ ನೀಡಿದೆ. ಅದೇನೆಂದರೆ ಅಗಸ್ಟ್-ಸೆಪ್ಟೆಂಬರ್ ತಿಂಗಳಲ್ಲಿ ಮತ್ತೆ ಭೀಕರ ಭೂಕುಸಿತ, ಪ್ರವಾಹ ಸಾಧ್ಯತೆ ದಟ್ಟವಾಗಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.
ಅಗಸ್ಟ್ ಹಾಗೂ ಸೆಪ್ಟೆಂಬರ್ ತಿಂಗಳಲ್ಲಿ ‘ಲಾ ಲಿನಾ’ ಮಾರುತ ರೂಪುಗೊಳ್ಳಲಿದೆ. ಇದು ಭಾರೀ ಮಳೆಯನ್ನೇ ತರಿಸಲಿದೆ. ಈ ಮಳೆಗೆ ಮತ್ತಷ್ಟು ಗುಡ್ಡಗಳು ಕುಸಿಯುವ ಸಾಧ್ಯತೆ ಇದೆ. ಅಗಸ್ಟ್ ಮೊದಲ ವಾರಾಂತ್ಯಕ್ಕೆ ಮಳೆ ಕಡಿಮೆಯಾಗಲಿದೆ. ಇದರಿಂದ ಕೃಷಿ ಚಟುವಟಿಕೆಗಳು ಚುರುಕುಗೊಳ್ಳಲು ಅನುವು ಮಾಡಿಕೊಡಲಿದೆ. ಆದರೆ ಆಗಸ್ಟ್ ಅಂತ್ಯ ಹಾಗೂ ಸೆಪ್ಟೆಂಬರ್ ತಿಂಗಳಲ್ಲಿ ಲಾ ನಿನಾ ಮಾರುತ ರೂಪುಗೊಂಡು ಅವಾಂತರ ಸೃಷ್ಟಿಸಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.
ಲಾ ನಿನಾ ಮಾರುತದಿಂದ ಒಂದೇ ಭಾರಿ ಭಾರಿ ಮಳೆ ಸುರಿಯುವ ಕಾರಣ ಹಲವು ಅವಘಡ ಸಂಭವಿಸುವ ಸಾಧ್ಯತೆ ಇದೆ. ಪ್ರಮುಖವಾಗಿ ಬೆಟ್ಟದ ತಪ್ಪಲಿನ ಪ್ರದೇಶ, ನದಿ ಪಾತ್ರದ ಪ್ರದೇಶಗಳಲ್ಲಿ ಅಪಾಯ ಹೆಚ್ಚು. ಅಪಾಯಾಕಾರಿ ಬೆಟ್ಟ, ಪರ್ವತಗಳು ಕುಸಿಯುವ ಭೀತಿ ಹೆಚ್ಚಾಗಿದೆ. ಇನ್ನು ನದಿಗಳು ಉಕ್ಕಿ ಹರಿಯಲಿದೆ. ಈ ವೇಳೆ ಭೂಕುಸಿತ ಸಂಭವಿಸಿದರೆ, ನದಿಗಳು ದಿಕ್ಕನ್ನೇ ಬದಲಿಸಿ ಗ್ರಾಮ, ಪಟ್ಟಣಗಳನ್ನು ಸರ್ವನಾಶ ಮಾಡಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಸಿದೆ.
ಲಾ ನಿನಾ ಮಳೆಯ ಪರಿಣಾಮ ಭಾರತದ ಬಹುತೇಕ ರಾಜ್ಯಗಳಲ್ಲಿ ಕಾಣಿಸಿಕೊಳ್ಳಲಿದೆ ಎಂದಿದೆ. ಮಧ್ಯ ಹಾಗೂ ಪಾರ್ವ ಸಮಭಾಜಕ ಪೆಸಿಫಿಕ್ನಲ್ಲಿ ಸಮುದ್ರದ ತಂಪಾದ ವಾತಾವರಣದಿಂದ ರೂಪುಗೊಳ್ಳುವ ಲಾ ನಿನಾ ಮಾರುತ ಭಾರತದಲ್ಲಿ ಹೆಚ್ಚಿನ ಮಳೆ ಸುರಿಸಲಿದೆ. ಇದು ಸಾಮಾನ್ಯ ಪ್ರಕ್ರಿಯೆಯಾಗಿದೆ. ಆದರೆ ಈ ಬಾರಿ ಮಳೆ ಪ್ರಮಾಣ ಕೊಂಚ ಹೆಚ್ಚಾಗಲಿದೆ. ಈಗಾಗಲೇ ಮಳೆಯಿಂದ ಭೂಮಿ ಕುಸಿಯುತ್ತಿದೆ. ಇದರ ಬೆನ್ನಲ್ಲೇ ಲಾ ನಿನಾ ಮಳೆಯಿಂದ ಭೂಮಿ ಮತ್ತಷ್ಟು ಕುಸಿಯುವ ಆತಂಕ ಹೆಚ್ಚು ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.