ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಶ್ಮೀರದ ಪೂಂಚ್ ಸೆಕ್ಟರ್ನಲ್ಲಿ ಭಾರತೀಯ ವಾಯುಸೇನೆಯ ವಾಹನದ ಮೇಲೆ ನಡೆದ ದಾಳಿಯ ಉಗ್ರರನ್ನು ಹೆಡೆಮುರಿ ಕಟ್ಟಲು ಸೇನಾ ಪಡೆಗಳು ಅವಿರತ ಪ್ರಯತ್ನ ಮಾಡುತ್ತಿವೆ. ಘಟನೆ ನಡೆದ ಶಾಹಸಿತಾರ್ (Shahsitar) ಮೊದಲಾದ ಕಡೆ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ.
ಇದೀಗ ಈ ಸಂಬಂಧ ಮೇ 5ರಂದು ಸಂಭವಿಸಿದ ಈ ದಾಳಿಯ ರೂವಾರಿಗಳೆನ್ನಲಾದ ಇಬ್ಬರು ಪಾಕಿಸ್ತಾನೀ ಉಗ್ರಗಾಮಿಗಳ ಸ್ಕೆಚ್ ಅನ್ನು ಭದ್ರತಾ ಪಡೆಗಳು ಬಿಡುಗಡೆ ಮಾಡಿವೆ. ಇವರ ಬಗ್ಗೆ ಸುಳಿವು ನೀಡಿದವರಿಗೆ 20 ಲಕ್ಷ ರೂ ಬಹುಮಾನ ಕೊಡುವುದಾಗಿಯೂ ಘೋಷಿಸಲಾಗಿದೆ.
ಮೇ 4, ಶನಿವಾರ ಸಂಜೆ ಪೂಂಚ್ ಜಿಲ್ಲೆಯ ಶಾಹಸಿತಾರ್ ಎಂಬಲ್ಲಿ ಹೋಗುತ್ತಿದ್ದ ವಾಯುಪಡೆ ವಾಹನದ ಮೇಲೆ ಉಗ್ರರು ದಾಳಿ ಎಸಗಿದ್ದರು. ಈ ದುರ್ಘಟನೆಯಲ್ಲಿ ವಾಯುಪಡೆಯ ಕಾರ್ಪೊರಾಲ್ ಆಗಿದ್ದ ವಿಕ್ಕಿ ಪಹಾಡೆ ಮೃತಪಟ್ಟರು. ಇನ್ನೂ ನಾಲ್ವರು ಗಾಯಗೊಂಡಿದ್ದರು.
ದಾಳಿ ಬಳಿಕ ಪರಾರಿಯಾದ ಉಗ್ರರನ್ನು ಹಿಡಿಯಲು ಭದ್ರತಾ ಪಡೆ ವ್ಯಾಪಕ ಶೋಧ ಕಾರ್ಯಾಚರಣೆ ಕೈಗೊಂಡಿದೆ. ಬುಲೆಟ್ಪ್ರೂಫ್ ವಾಹನ, ಶ್ವಾನ ದಳಗಳನ್ನು ಕಾರ್ಯಾಚರಣೆಯಲ್ಲಿ ಬಳಸಿಕೊಳ್ಳಲಾಗುತ್ತಿದೆ.