ಹೊಸದಿಗಂತ ಡಿಜಿಟಲ್ ಡೆಸ್ಕ್:
ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್ಸಿಪಿ) ಮುಖ್ಯಸ್ಥ ಶರದ್ ಪವಾರ್ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಕ್ಕಾಗಿ ಬಂಧಿತರಾಗಿರುವ ಯುವ ಮರಾಠಿ ನಟಿ ಕೇತಕಿ ಚಿತಾಲೆ ಅವರಿಗೆ ಜಾಮೀನು ನೀಡಲಾಗಿದೆ. ಸುಮಾರು ನಲವತ್ತು ದಿನಗಳಿಂದ ಜೈಲಿನಲ್ಲಿದ್ದ ಕೇತಕಿ ಜೈಲಿನಿಂದ ಬಿಡುಗಡೆ ಭಾಗ್ಯ ಸಿಕ್ಕಿದೆ. ಕಳೆದ ತಿಂಗಳು ಶರದ್ ಪವಾರ್ ಬಗ್ಗೆ ಬೇರೊಬ್ಬರು ಬರೆದಿದ್ದ ಪೋಸ್ಟ್ವೊಂದನ್ನು ಚಿತಾಲೆ ಹಂಚಿಕೊಂಡಿದ್ದರು. ಮರಾಠಿ ಕವಿತೆಯನ್ನು ಉಲ್ಲೇಖಿಸಿದ ಪೋಸ್ಟ್ನಲ್ಲಿ ‘ನರಕ ಕಾಯುತ್ತಿದೆ’ ಮತ್ತು ‘ನೀವು ಬ್ರಾಹ್ಮಣರನ್ನು ದ್ವೇಷಿಸುತ್ತೀರಿ’ ಎಂಬರ್ಥದ ಕೆಲವು ಪದಗಳನ್ನು ಬಳಸಲಾಗಿತ್ತು. ಹಾಗಾಗಿ ಆಕೆಯ ವಿರುದ್ಧ ಥಾಣೆ, ಪಿಂಪ್ರಿ ಮತ್ತು ಪುಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ನಟಿ ವಿರುದ್ಧ ಐಪಿಸಿ ಸೆಕ್ಷನ್ 500, ಸೆಕ್ಷನ್ 501 ಮತ್ತು ಸೆಕ್ಷನ್ 153 ಎ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಿ, ಥಾಣೆ ಅಪರಾಧ ವಿಭಾಗದ ಪೊಲೀಸರು ಕೇತಕಿಯನ್ನು ಬಂಧಿಸಿದ್ದರು. ನವಿ ಮುಂಬೈ ಪೊಲೀಸರು ಕರೆದೊಯ್ಯುತ್ತಿದ್ದಾಗ ಕೆಲವು ಎನ್ಸಿಪಿ ಕಾರ್ಯಕರ್ತರು ಆಕೆಯ ಮೇಲೆ ಹಲ್ಲೆ ನಡೆಸಿದರು. ಸುಮಾರು ನಲವತ್ತು ದಿನಗಳಿಂದ ಕೇತಕಿಯನ್ನು ಥಾಣೆ ಜೈಲಿನಲ್ಲಿ ಇರಿಸಲಾಗಿದೆ. ಥಾಣೆ ನ್ಯಾಯಾಲಯ ಇದೀಗ ನಟಿಗೆ ಜಾಮೀನು ಮಂಜೂರು ಮಾಡಿದ್ದು, ಗುರುವಾರ ಆಕೆ ಜೈಲಿನಿಂದ ಬಿಡುಗಡೆಯಾಗುವ ನಿರೀಕ್ಷೆಯಿದೆ.