ಹೊಸದಿಗಂತವರದಿ, ದಾವಣಗೆರೆ:
ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆತರಲಾಗಿದ್ದ ಕಳ್ಳತನ ಆರೋಪಿಯು ಪೊಲೀಸರ ಕಣ್ಣು ತಪ್ಪಿಸಿ ಪರಾರಿಯಾಗಿರುವ ಘಟನೆ ನಗರದಲ್ಲಿ ವರದಿಯಾಗಿದೆ.
ಚಿತ್ರದುರ್ಗ ಮೂಲದ ಕಳ್ಳತನದ ಆರೋಪಿ ತೇಜು ಎಂಬಾತ ಕಳೆದ ಏಪ್ರಿಲ್ ೩೦ರಂದು ನಗರದ ಜಿಲ್ಲಾ ಕಾರಾಗೃಹಕ್ಕೆ ದಾಖಲಾಗಿದ್ದ. ಆರೋಗ್ಯ ಸರಿಯಿಲ್ಲದ ಕಾರಣಕ್ಕೆ ತೇಜು ಸೇರಿದಂತೆ ಇಬ್ಬರು ಖೈದಿಗಳನ್ನು ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಗಿತ್ತು.
ಈ ವೇಳೆ ಆರೋಪಿ ತೇಜು ಪರಾರಿಯಾಗಿದ್ದು, ಈ ಸಂಬಂದ ಬಸವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವ ಮಾಹಿತಿ ಲಭ್ಯವಾಗಿದೆ. ಕಳೆದ ವರ್ಷ ಕೂಡ ದಾವಣಗೆರೆ ಕಾರಾಗೃಹದ ಗೋಡೆ ಹಾರಿ ತಪ್ಪಿಸಿಕೊಂಡಿದ್ದ ಓರ್ವ ಅತ್ಯಾಚಾರ ಪ್ರಕರಣದ ಆರೋಪಿಯನ್ನು ಪತ್ತೆ ಹಚ್ಚಿ ವಶಕ್ಕೆ ಪಡೆಯಲಾಗಿತ್ತು. ಇದೀಗ ಅಂತಹದೇ ಘಟನೆ ವರದಿಯಾಗಿದೆ. ಮಾದಕವಸ್ತು ಪ್ರಕರಣ, ಖೈದಿಗಳ ಗಲಾಟೆ ನಂತರ ಕಳ್ಳತನ ಆರೋಪಿಯೊಬ್ಬ ಪರಾರಿಯಾಗುವ ಮೂಲಕ ದಾವಣಗೆರೆ ಜೈಲು ಮತ್ತೆ ಸುದ್ದಿಯಲ್ಲಿದೆ.