ಹೊಸದಿಗಂತ ವರದಿ,ಶಿವಮೊಗ್ಗ:
ಹಾಸನದ ಲಕ್ಷ್ಮಿಪುರ ಬಡಾವಣೆಯಲ್ಲಿ ಹಣ ಮತ್ತು ಒಡವೆಗಾಗಿ ಹಾಡುಹಗಲೇ ಮಹಿಳೆಯೊಬ್ಬರನ್ನ ಕೊಲೆ ಮಾಡಿರುವ ಘಟನೆ ನಡೆದಿದೆ.
ಮಂಜುಳಾ (42) ಕೊಲೆಯಾದ ಮಹಿಳೆ.
ಇಂದು ಮಧ್ಯಾಹ್ನ ಬೈಕ್ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಏಕಾಏಕಿ ಮನೆಗೆ ನುಗ್ಗಿ ಮನೆಯಲ್ಲಿದ್ದ ಚಿನ್ನಾಭರಣ ದೋಚಲು ಪ್ರಯತ್ನಪಟ್ಟಿದ್ದಾರೆ. ಈ ವೇಳೆ, ಮಧ್ಯ ಪ್ರವೇಶಿಸಿದ ಮಂಜುಳಾ ಅವರನ್ನು ಕುತ್ತಿಗೆಗೆ ತಂತಿಯಿಂದ ಬಿಗಿದು ಕೊಲೆ ಮಾಡಿ, ಪರಾರಿಯಾಗಿದ್ದಾರೆ.
ಹಾಸನ ನಗರದಲ್ಲಿ ಚಿನ್ನದ ಅಂಗಡಿ ನಡೆಸುತ್ತಿರುವ ಕುಮಾರ್ ಎಂಬುವವರ ಪತ್ನಿ ಮಂಜುಳಾ ಇಂದು ಬೆಳಗ್ಗೆ ಎಂದಿನಂತೆ ಮನೆ ಕೆಲಸ ಮಾಡುತ್ತಿದ್ದ ವೇಳೆ ಬೈಕಿನಲ್ಲಿ ಬಂದ ಇಬ್ಬರು ಅಪರಿಚಿತ ವ್ಯಕ್ತಿಗಳು, ಬಾಗಿಲು ತೆಗೆದಿದ್ದ ಮನೆಗೆ ಏಕಾಏಕಿ ನುಗ್ಗಿ ಅವರನ್ನ ಮೊದಲಿಗೆ ಬೆದರಿಸಿದ್ದಾರೆ.ಮನೆಯಲ್ಲಿರುವ ಒಡವೆಗಳನ್ನು ಮತ್ತು ನಗದನ್ನ ಕೊಡುವಂತೆ ಮಾರಕಾಸ್ತ್ರಗಳನ್ನು ತೋರಿಸಿ ಬೆದರಿಸಿದ್ದಾರೆ. ನಂತರ ಅವರಿಂದಲೇ ಮನೆಯ ಬೀಗದ ಕೀಯನ್ನು ಪಡೆದುಕೊಂಡು, ಹಣ ದೋಚಿದ ಬಳಿಕ ಆಕೆಯನ್ನು ಬರ್ಬರವಾಗಿ ಕೊಲೆಗೈದು ಪರಾರಿಯಾಗಿದ್ದಾರೆ.
ಸುದ್ದಿ ತಿಳಿದು ಪೆನ್ಷನ್ ಮೊಹಲ್ಲಾ ಪೊಲೀಸರು, ಬೆರಳಚ್ಚು ತಜ್ಞರು ಹಾಗೂ ಶ್ವಾನದಳ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.