ಹೊಸ ದಿಗಂತ ವರದಿ, ಅಂಕೋಲಾ:
ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಸುಪ್ರಸಿದ್ಧ ಶ್ರೀಶಾಂತಾದುರ್ಗಾ ದೇವಿಯ ಬಂಡಿ ಹಬ್ಬದ ಕಲಶದ ಮೆರವಣಿಗೆ ಅಕ್ಷಯ ತದಿಗೆ ದಿನ ಸಾಸಿ ಹಾಕುವ ಸಾಂಪ್ರದಾಯಿಕ ವಿಧಿ ವಿಧಾನಗಳೊಂದಿಗೆ ಆರಂಭವಾಯಿತು.
ತಾಲೂಕಿನ ಕುಂಬಾರಕೇರಿಯ ಕಲಶ ದೇವಾಲಯದಿಂದ ವಾದ್ಯ ಘೋಷ, ಛತ್ರ ಚಾಮರಗಳ ವೈಭವದೊಂದಿಗೆ ಕಲಶವನ್ನು ಹೊತ್ತ ಗುನಗರು, ಬಿಡುಗುನಗರು, ಕಟ್ಟಿಗೆದಾರರು ಭಕ್ತರಿಂದ ಪೂಜೆ ಸ್ವೀಕರಿಸಿ
ಶ್ರೀಶಾಂತಾದುರ್ಗಾ ದೇವಾಲಯಕ್ಕೆ ತೆರಳಿ ಅಲ್ಲಿ ಪೂಜೆ ಸ್ವೀಕರಿಸ ಲಾಯಿತು.
ಮೇ 13 ರಂದು ದೇವರು ಕರೆಯುವುದು, ಮೇ 16ರಂದು ಬಂಡಿ ಹಬ್ಬ, ಮೇ 17 ರಂದು ಮರು ಬಂಡಿಹಬ್ಬ ನಡೆಯಲಿದೆ.
ಈ ಮಧ್ಯೆ ಪ್ರತಿದಿನ ದೇವರ ಕಲಶದ ಮೆರವಣಿಗೆ ಬಂಡಿ ಬಜಾರದ ಆಡುಕಟ್ಟೆಯಲ್ಲಿ ಪರಿವಾರ ದೇವರುಗಳ ಮುಖವಾಡ ಕುಣಿತ ಮೊದಲಾದ ಸಂಪ್ರದಾಯಗಳು ಪ್ರತಿ ದಿನ ಜರುಗಲಿವೆ.
ಕಳೆದ ಎರಡು ವರ್ಷಗಳಿಂದ ಬಂಡಿ ಹಬ್ಬ ನಡೆಯದ ಕಾರಣ ಮಾನಸಿಕವಾಗಿ ನೊಂದಿರುವ ಜನರಿಗೆ ಬಂಡಿ ಹಬ್ಬದ ಕಲಶದ ಮೆರವಣಿಗೆ ನಡೆದಿರುವುದು ಹರ್ಷದ ವಾತಾವರಣಕ್ಕೆ ಕಾರಣವಾಗಿದೆ.