ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರು ವಿವಿ ಜ್ಞಾನಭಾರತಿ ಕ್ಯಾಂಪಸ್ನಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಹೀಗಾಗಿ ವಿವಿ ಆವರಣದಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ ಮುಂದುವರಿದಿದೆ.
ಈ ಬೆನ್ನಲ್ಲೇ ವಿವಿ ಆವರಣದಲ್ಲಿ ಖಾಸಗಿ ವಾಹನಗಳಿಗೆ ನಿರ್ಬಂಧ ಹೇರುವ ವಿಚಾರವಾಗಿ ಹೈವೋಲ್ಟೇಜ್ ಮೀಟಿಂಗ್ ನಡೆಸಲಾಯಿತು. ನಾಳೆಯಿಂದಲೇ ಬೆಂಗಳೂರು ವಿವಿ ಕ್ಯಾಂಪಸ್ ಟ್ರಾಫಿಕ್ ಎಂಪವರ್ಮೆಂಟ್ ಜಾರಿ ಆಗುತ್ತೆ ಎಂದು ಬೆಂಗಳೂರು ಪಶ್ಚಿಮ ವಿಭಾಗದ ಡಿಸಿಪಿ ಲಕ್ಷ್ಮಣ್ ನಿಂಬರಗಿ ತಿಳಿಸಿದ್ದಾರೆ.
ಹೆಲ್ಮೆಟ್, ತ್ರಿಬಲ್ ರೈಡಿಂಗ್, ಡ್ರಂಕ್ ಮತ್ತು ಡ್ರೈವ್ ಬಗ್ಗೆ ನಾಳೆಯಿಂದಲೇ ತಪಾಸಣೆ ನಡೆಸಲಾಗುತ್ತೆ. ಸಾರ್ವಜನಿಕರು ಸೇರಿದಂತೆ ವಿದ್ಯಾರ್ಥಿಗಳಿಗೂ ಈ ನಿಯಮ ಅನ್ವಯ ಅಂತ ತಿಳಿಸಿದ್ದಾರೆ.
ಇನ್ನು ಖಾಸಗಿ ವಾಹನಗಳ ಓಡಾಟಕ್ಕೆ ಸಮಯ ನಿಗದಿಯ ಕುರಿತು ಚರ್ಚೆ ನಡೆಸಲಾಯ್ತು. ಬೆಳಗ್ಗೆ 6 ರಿಂದ ರಾತ್ರಿ 8 ಗಂಟೆಯವರೆಗೆ ಮಾತ್ರ ಸಂಚಾರಕ್ಕೆ ಅವಕಾಶ ಕಲ್ಪಿಸುವ ಕುರಿತು ಚರ್ಚೆ ನಡೆಸಲಾಯ್ತು. ಈ ವಿಷಯ ತಿಳಿದ ಸ್ಥಳೀಯರು ಸಭೆ ನಡೆಸುತ್ತಿದ್ದ ಸ್ಥಳಕ್ಕೆ ಆಗಮಿಸಿ, ಯಾವುದೇ ಕಾರಣಕ್ಕೂ ವಾಹನಗಳಿಗೆ ನಿರ್ಬಂಧ ಹೇರಬಾರದು. ಭಾರೀ ವಾಹನಗಳಿಗೆ ನಿಷೇಧ ಹೇರಿ, ಅವೈಜ್ಞಾನಿಕ ಹಂಪ್ ಹಾಗೂ ಇತರೆ ಭದ್ರತಾ ಕ್ರಮಗಳನ್ನ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಬೆಂಗಳೂರು ವಿವಿ ಜ್ಞಾನಭಾರತಿಯಲ್ಲಿ ಒಂದರ ಹಿಂದೊಂದರಂತೆ ಅಪಘಾತ ಪ್ರಕರಣಗಳು ಸಂಭವಿಸುತ್ತಲೇ ಇವೆ. ಕಳೆದ ಮೂರು ದಿನಗಳಿಂದ ಅಪಘಾತಗಳನ್ನ ಕಂಡು ಬೇಸತ್ತಿರುವ ವಿದ್ಯಾರ್ಥಿಗಳು ಮೂರನೇ ದಿನವು ಪ್ರತಿಭಟನೆ ಮುಂದುವರೆಸಿದ್ದಾರೆ. ಎರಡು ದಿನದ ಹಿಂದಷ್ಟೇ ಬಿಎಂಟಿಸಿ ಬಸ್ ಹತ್ತುವಾಗ ಏಕಾಏಕಿ ಬಸ್ ಮುಂದೆ ಚಲಿಸಿದ್ದರಿಂದ ಆಯತಪ್ಪಿ ರಸ್ತೆಗೆ ಬಿದ್ದ ವಿದ್ಯಾರ್ಥಿನಿ ಶಿಲ್ಪ ಮೇಲೆ ಬಸ್ನ ಹಿಂಬದಿ ಚಕ್ರ ಹರಿದು ಆಕೆ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿತ್ತು. ಸದ್ಯ ಆಕೆ ಈಗಲೂ ಗಂಭೀರ ಸ್ಥಿತಿಯಲ್ಲಿದ್ದಾರೆ.