ಹೊಸದಿಗಂತ ಡಿಜಿಟಲ್ ಡೆಸ್ಕ್:
ನಮೀಬಿಯಾದಿಂದ ಭಾರತಕ್ಕೆ ತಂದಿದ್ದ ‘ಶೌರ್ಯ’ ಹೆಸರಿನ ಚೀತಾ ಸೆಪ್ಟಿಸೀಮಿಯಾದಿಂದ ಮೃತಪಟ್ಟಿದ್ದು, ಈ ಸಮಸ್ಯೆಯಿಂದ ಮೃತಪಟ್ಟ 4ನೇ ಚೀತಾ ಇದಾಗಿದೆ ಎಂದು ರಾಜ್ಯಸಭೆಗೆ ಕೇಂದ್ರದ ಪರಿಸರ ಸಚಿವ ಭೂಪೇಂದ್ರ ಯಾದವ್ ಮಾಹಿತಿ ನೀಡಿದ್ದಾರೆ.
ಮಧ್ಯ ಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನದಲ್ಲಿ(ಕೆಎನ್ಪಿ) ಇರಿಸಲಾಗಿದ್ದ ಶೌರ್ಯ ಹೆಸರಿನ ಚೀತಾ, ಜನವರಿ 10ರಂದು ಮೃತಪಟ್ಟಿತ್ತು.
ಆಫ್ರಿಕಾದ ಚೀತಾಗಳನ್ನು ತರುವ ಕಾರ್ಯಾಚರಣೆ ಆರಂಭವಾದ 2022ರಿಂದ 10 ಚೀತಾಗಳು ಮೃತಪಟ್ಟಿವೆ ಎಂದು ಅವರು ತಿಳಿಸಿದ್ದಾರೆ.
ನಮೀಬಿಯಾದಿಂದ ತರಲಾಗಿದ್ದ ಹೆಣ್ಣು ಚೀತಾ ಬಿಳಿಸಿ, ದಕ್ಷಿಣ ಆಫ್ರಿಕಾದಿಂದ ತರಲಾಗಿದ್ದ ತೇಜಾ ಮತ್ತು ಸೂರಜ್ ಹೆಸರಿನ ಎರಡು ಗಂಡು ಚಿರತೆಗಳು ಕಳೆದ ವರ್ಷ ಸೆಪ್ಟಿಸೀಮಿಯಾದಿಂದ ಮೃತಪಟ್ಟಿದ್ದವು.
ಚೀತಾಗಳ ಕುತ್ತಿಗೆ ಮತ್ತು ಬೆನ್ನಿನ ಮೇಲೆ ಚಳಿ ತಡೆದುಕೊಳ್ಳಲು ಇರುವ ದಪ್ಪ ಚರ್ಮದಲ್ಲಿ ಗಾಯವಾಗಿ, ಬಳಿಕ ಅದು ಹುಳುಗಳಿಂದ ಸೋಂಕಿಗೆ ಒಳಗಾಗಿ ಸೆಪ್ಟಿಸೀಮಿಯಾ ಆಗುತ್ತಿದೆ’ ಎಂದೂ ಅವರು ಹೇಳಿದ್ದಾರೆ
ಮುಂದಿನ ಐದು ವರ್ಷಗಳಲ್ಲಿ ಲಭ್ಯತೆ ಆಧಾರದ ಮೇಲೆ ದಕ್ಷಿಣ ಆಫ್ರಿಕಾ ಮತ್ತು ನಮೀಬಿಯಾದಿಂದ 12-15ಚೀತಾಗಳನ್ನು ತರುವ ಪ್ರಸ್ತಾವನೆ ಇದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ದಕ್ಷಿಣ ಆಫ್ರಿಕಾ ಮತ್ತು ನಮೀಬಿಯಾದಿಂದ ತರಲಾಗಿದ್ದ 20 ಚೀತಾಗಳ ಪೈಕಿ 7 ಹಾಗೂ ಭಾರತದಲ್ಲಿ ಜನಿಸಿದ 11 ಚೀತಾ ಮರಿಗಳಲ್ಲಿ 3 ಮೃತಪಟ್ಟಿವೆ ಎಂದೂ ಅವರು ತಿಳಿಸಿದ್ದಾರೆ.