ಹಲಸೂರುಗೇಟ್ ಜೋಡಿ ಕೊಲೆ ಪ್ರಕರಣ: 11 ಆರೋಪಿಗಳ ವಿರುದ್ಧ ಎಫ್‌ಐಆ‌ರ್ ದಾಖಲು

ಹೊಸದಿಗಂತ ವರದಿ, ಬೆಂಗಳೂರು:

ಕಳೆದೆರಡು ದಿನಗಳ ಹಿಂದೆ ಹಲಸೂರುಗೇಟ್ ಠಾಣೆ ವ್ಯಾಪ್ತಿಯ ಕುಂಬಾರಪೇಟೆ ಮುಖ್ಯರಸ್ತೆಯಲ್ಲಿ ನಡೆದಿರುವ ಸುರೇಶ್ (62) ಮತ್ತು ಮಹೇಂದ್ರ (52) ಅವರ ಜೋಡಿ ಕೊಲೆಗೆ ಸಂಬಂಧಿಸಿದಂತೆ 11 ಆರೋಪಿಗಳ ವಿರುದ್ಧ ಹಲಸೂರುಗೇಟ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆ‌ರ್ ದಾಖಲಾಗಿದೆ.

ಪ್ರಮುಖ ಆರೋಪಿ ಭದ್ರಿ ಪ್ರಸಾದ್ (56), ಮುನಿಸ್ವಾಮಿ.ಕೆ, ರಾಜಪ್ಪ.ಎಂ, ಮಹೇಶ್.ಜಿ, ವೆಂಕಟೇಶ್ ಜಿ.ಎಸ್, ಚಂದ್ರಶೇಖರ್ ಆರ್.ಎಸ್, ರವಿಶಂಕರ್, ಶಿವಕುಮಾರ್ ಎ, ರಾಮಪ್ಪ ಜಿ, ಶಶಿಕಲಾ ಕೆ, ಚನ್ನಕೃಷ್ಣಪ್ಪ ಬಿ, ಎಂಬುವ ವಿರುದ್ದ ಹಲಸೂರು ಪೊಲೀಸರು ಎಫ್‌ಐಆ‌ರ್ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಕುಂಬಾರಪೇಟೆ ಅನ್ನದಾತ ಸಮಿತಿ ಟ್ರಸ್ಟ್ ಮತ್ತು ಕುಂಬಾರಪೇಟೆ ಆಂಜನೇಯ ಸ್ವಾಮಿ ದೇವಸ್ಥಾನದ ಕಟ್ಟಡ ಸಮಿತಿ ಟ್ರಸ್ಟ್ ಮತ್ತು ಕುಂಬಾರಪೇಟೆಯ ಅನ್ನದಾನ ಸಮಿತಿ ಕಲ್ಯಾಣ ಮಂದಿರ ಟ್ರಸ್ಟ್‌ಗಳ ಆಸ್ತಿಯ ವಿಚಾರವಾಗಿ ಆರೋಪಿ ಭದ್ರಿ ಹಾಗೂ ಆತನ ಸಂಗಡಿಗರು, ಸುರೇಶ್ ನಡುವೆ ಸಿವಿಲ್ ವ್ಯಾಜ್ಯವಿತ್ತು. ಈ ಬಗ್ಗೆ ನ್ಯಾಯಾಲಯಗಳಲ್ಲಿ ಸಿವಿಲ್ ಮತ್ತು ಅಪರಾಧ ಪ್ರಕರಣಗಳು ನ್ಯಾಯಾಲಯದ ಮುಂದೆ ವಿಚಾರಣೆಯಲ್ಲಿವೆ ಇದಾದ ನಂತರವೂ ಉಚ್ಚನ್ಯಾಯಾಲಯದಲ್ಲಿ ಸುರೇಶ್ ಪರವಾಗಿ ತೀರ್ಪು ಬಂದಿದೆ. ಮತ್ತೆ 2023ರಲ್ಲಿ ಆಸ್ತಿ ವಿಚಾರವಾಗಿ ಆರೋಪಿ ಭದ್ರಿ ಹಾಗೂ ಈ ಹನ್ನೊಂದು ಜನ ಸಂಗಡಿಗರು ಸೇರಿಕೊಂಡು ಸುರೇಶ್ ಪತ್ನಿ ಮೇಲೆ ಹಲ್ಲೆರುವ ವಿಚಾರವಾಗಿ ಇದೇ ಹಲಸೂರುಗೇಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಇದೂ ಕೂಡ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದೆ ಎಂದು ಸುರೇಶ್ ಪುತ್ರಿ ವಿನುತಾ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಆಸ್ತಿ ವಿಚಾರವಾಗಿ ಸುರೇಶ್ ವಿರುದ್ಧ ಸಿಟಿ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಸುಳ್ಳು ಆರೋಪದ ದೂರು ನೀಡಿದ್ದು, ಅದರಲ್ಲೂ ಪರವಾಗಿಯೇ ತೀರ್ಪು ಬಂದಿತ್ತು. ಇದೇ ಜಿದ್ದಿನಿಂದ ಇತರೆ ಆರೋಪಿಗಳ ಕುಮ್ಮಕ್ಕಿನಿಂದ ಆರೋಪಿ ಭದ್ರಿ ಕೃತ್ಯವೆಸಗಿದ್ದಾರೆ. ಆದ್ದರಿಂದ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಹಾಗೂ ತಮ್ಮ ಕುಟುಂಬಕ್ಕೆ ರಕ್ಷಣೆ ಒದಗಿಸುವಂತೆ ಸುರೇಶ್ ಪುತ್ರಿ ಪೊಲೀಸರಿಗೆ ದೂರು ನೀಡಿದ್ದರು. ಇದೀಗ ಆರೋಪಿ ಬದ್ರಿ ಪ್ರಸಾದ್‌ನನ್ನು ಬಂಧಿಸಿರುವ ಹಲಸೂರು ಗೇಟ್ ಠಾಣೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!